‘ರೈತ ಚಳವಳಿ ಮತ್ತು ಬರಹಗಾರರ ವಿರೋಧ’ ಎಂಬ ಪತ್ರದಲ್ಲಿ (ವಾ.ವಾ., ಫೆ. 25) ಹೇಳಿರುವಂತೆ, ಬರಹಗಾರರು ಬರಹಗಾರರಾಗಿ ಉಳಿಯದೆ ವಿಭಕ್ತಗೊಂಡು ಒಂದಲ್ಲ ಒಂದು ರಾಜಕೀಯ ಪಕ್ಷದವರಾಗಿರುವ ವಿದ್ಯಮಾನ ನಿರ್ಮಾಣವಾಗಿದೆ ಎನ್ನುವುದು ನಿಜವೆನಿಸುತ್ತದೆ. ಅಂದರೆ, ನಮ್ಮ ರಾಜಕೀಯದ ಬಕಾಸುರ ಪ್ರವೃತ್ತಿಯ ವ್ಯಾಪ್ತಿ ಇಂಥದ್ದು! ಈಗ ದೆಹಲಿಯಲ್ಲಿನ ರೈತ ಚಳವಳಿಗೆ ಕಾರಣವಾಗಿರುವುದು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳು. ಇವು ಕೃಷಿ ಕ್ಷೇತ್ರಕ್ಕೆ ಹಾಗೂ ಕೃಷಿಕರಿಗೆ ಮಾರಕ ಎಂದು ಸಾಧಿಸಿ ತೋರಿಸಲು ಬರಹಗಾರರಾಗಿರುತ್ತಲೇ ಕಾನೂನು ಪಂಡಿತರೂ ಆಗಿರುವವರೆಷ್ಟು ಮಂದಿ? ಕೃಷಿ ಪ್ರಪಂಚದಲ್ಲಿ ಈಗ ಇರುವ ವಿಸಂಗತಿಗಳು ಯಾವುವು, ಈ ಕಾಯ್ದೆಗಳು ಅವುಗಳನ್ನು ತೊಡೆದು ಹಾಕಿ ಕೃಷಿಕರ ಬದುಕು ಹಸನು ಮಾಡುವುವೇ ಅಥವಾ ಅವರನ್ನು ಇನ್ನಷ್ಟು ಶೋಷಣೆಗೆ ನೂಕುವ ಗುರಿಯುಳ್ಳವೇ ಎನ್ನುವುದನ್ನು ಎಷ್ಟು ಬರಹಗಾರರು ವಿಶ್ಲೇಷಿಸಲು ಸಮರ್ಥರಾಗಿದ್ದಾರೆ?