ಅಕ್ರಮವಾಗಿ ಹಣ ಗಳಿಸಬೇಕು ಎನ್ನುವ ಮನಃಸ್ಥಿತಿಯವರಿಗೆ, ಇದು ಶೋಷಿತರ, ದಮನಿತರ ಹಣ ಎಂಬ ಭೇದ ಇರದು. ಇದಕ್ಕೆ ಅಂಬೇಡ್ಕರ್, ಅರಸು, ವಾಲ್ಮೀಕಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳ ಮೇಲೆ ಎಸಿಬಿ ಇತ್ತೀಚೆಗೆ ನಡೆಸಿರುವ ದಾಳಿ ತಾಜಾ ಉದಾಹರಣೆ. ನಿಗಮಗಳ ಅಧಿಕಾರಿಗಳ ಬಗ್ಗೆ ದೂರುಗಳು ಬಂದಿದ್ದರಿಂದ ಈ ದಾಳಿ ನಡೆದಿದೆ. ಗಂಗಾ ಕಲ್ಯಾಣ ಯೋಜನೆ ಸೌಲಭ್ಯಕ್ಕೆ ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡುತ್ತಾರೆ. ಸಹಜವಾಗಿಯೇ ಅವರು ತಮ್ಮ ಮತದಾರರು ಮತ್ತು ಹಿಂಬಾಲಕರಿಗೆ ಆದ್ಯತೆ ನೀಡಬೇಕಾಗುತ್ತದೆ. ಅದೇ ಸ್ಥಳೀಯ ಮದ್ಯಸ್ಥಿಕೆದಾರನೊಬ್ಬನಿಗೆ ₹ 25 ಸಾವಿರ ನೀಡಿದರೆ, ಯಾವ ಗೊಡವೆಯೂ ಇಲ್ಲದೆ ಗಂಗಾ ಕಲ್ಯಾಣ ಕೊಳವೆ ಬಾವಿ ಮಂಜೂರಾಗುತ್ತದೆ.