ಮರುದಿನ ಮಕ್ಕಳು ತಾವು ಬರೆದ ಪ್ರಬಂಧಗಳನ್ನು ಉತ್ಸಾಹದಿಂದ ತಂದಿದ್ದರು. ಅವುಗಳಲ್ಲಿ ಊರಿನ ಭೌತಿಕ ಸಂಪನ್ಮೂಲಗಳು, ಸರ್ಕಾರಿ ಕಚೇರಿಗಳು, ಪರಿಸರ, ಗುಡ್ಡ, ಪ್ರಾಣಿ ಪಕ್ಷಿಗಳು, ರಸ್ತೆಗಳು, ಬೆಳೆ ಮುಂತಾದವುಗಳ ಪ್ರಸ್ತಾಪ ಇತ್ತು. ಆದರೆ ಕೊನೆಯಲ್ಲಿ ‘ನನ್ನ ಕನಸಿನ ಊರು’ ಎಂಬ ವಿಭಾಗದಲ್ಲಿ ಹೆಚ್ಚಿನ ಮಕ್ಕಳು, ‘ನಮ್ಮೂರು ಧೂಮಪಾನ, ಮದ್ಯಪಾನ, ಗುಟ್ಕಾ ಮತ್ತು ಕೊರೊನಾದಿಂದ ದೂರವಾಗಬೇಕು. ಪ್ರತೀ ಮನೆಯಲ್ಲೂ ಶೌಚಾಲಯ ಇರಬೇಕು, ಎಲ್ಲರೂ ಒಂದಾಗಿ ಬಾಳಬೇಕು’ ಎಂದೆಲ್ಲ ಬರೆದಿದ್ದರು! ಇವರಲ್ಲಿ ಬಹುತೇಕರು ವಿದ್ಯಾರ್ಥಿನಿಯರು ಎಂಬುದು ವಿಶೇಷ.