ಇಂದಿನ ಬಹುತೇಕ ಮಠಾಧೀಶರ ನಡವಳಿಕೆಯನ್ನು ರವೀಂದ್ರ ಭಟ್ಟ ಅವರ ಲೇಖನ (ಪ್ರ.ವಾ., ಡಿ. 30) ನಿರೂಪಿಸಿದೆ. ನಮ್ಮ ಅನೇಕ ಮಠಾಧೀಶರು ರಾಜಕಾರಣಿಗಳ ಜೊತೆ ಸೇರಿ ಒಳಗೊಳಗೆ ಆಡುವ ಆಟಗಳಿಗೆ, ಮಾಡುವ ಮಾಟಗಳಿಗೆ ಈಗ ಇತಿಮಿತಿಯೇ ಇಲ್ಲದಂತಾಗಿದೆ. ಕೆಲ ಸ್ವಾಮೀಜಿಗಳಂತೂ ತಮ್ಮ ಮಠದ ಭಕ್ತರನ್ನೋ ಅಥವಾ ತಮಗೆ ಲಾಭ ಮಾಡಿಕೊಡುವ ರಾಜಕೀಯ ಪಕ್ಷದ ಅಭ್ಯರ್ಥಿಯನ್ನೋ ಢಾಣಾ ಡಂಗುರವಾಗಿ ಬೆಂಬಲಿಸುತ್ತಾರೆ. ಅಲ್ಲದೆ ಇಂಥವರನ್ನೇ ಬೆಂಬಲಿಸುವಂತೆ ಫರ್ಮಾನು ಬೇರೆ ಹೊರಡಿಸುತ್ತಾರೆ. ಪಕ್ಷ ರಾಜಕಾರಣಿಗಳಂತೆ ಅವರು ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ. ಹಣ, ಹೆಂಡ ಹಂಚುವುದಕ್ಕೆ ಪ್ರೋತ್ಸಾಹಿಸುವುದಿಲ್ಲ. ಆದರೆ ಇವೆರಡನ್ನು ಬಿಟ್ಟು ಉಳಿದೆಲ್ಲ ರಾಜಕಾರಣ ಮಾಡುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಅವರು ಇದನ್ನು ಕದ್ದುಮುಚ್ಚಿಯೇನೂ ಮಾಡುತ್ತಿಲ್ಲ. ಈ ಸ್ವಾಮಿಗಳು ಅನೇಕ ವೇಳೆ ಪರಮಭ್ರಷ್ಟರಿಗೂ ಆಶೀರ್ವಾದ ಮಾಡುತ್ತಾರೆ. ದುರಾಚಾರಿ, ದುರ್ಗುಣಿಗಳಿಗೂ ಸ್ವಾಮಿಗಳ ಹರಕೆ ದಕ್ಕುತ್ತದೆ.