ಇಂತಹ ಗುಣವನ್ನು ಜವಾಹರಲಾಲ್ ನೆಹರೂ ಅವರಲ್ಲಿ ಇತ್ತು. ಪ್ರಧಾನಿ ನೆಹರೂ ಅವರನ್ನು, ರಾಮ ಮನೋಹರ ಲೋಹಿಯಾ ಅವರಷ್ಟು ಸಂಸತ್ತಿನ ಒಳಗೆ ಮತ್ತು ಹೊರಗೆ ಟೀಕೆ ಮಾಡುತ್ತಿದ್ದವರು ಬೇರೆ ಸಿಗಲಾರರು. ಚುನಾವಣೆಯೊಂದರಲ್ಲಿ ಲೋಹಿಯಾ ಸೋತಾಗ, ನೆಹರೂ ಅವರು ‘ರಾಮಮನೋಹರ ಲೋಹಿಯಾ ಇಲ್ಲದ ಪಾರ್ಲಿಮೆಂಟ್ ಅಪೂರ್ಣ’ ಎಂದು ಅವರ ಸೋಲಿಗೆ ವಿಷಾದಿಸಿದ್ದರು. ಉಪಚುನಾವಣೆಯಲ್ಲಿ ಲೋಹಿಯಾ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದಾಗ, ‘ಈಗ ಪಾರ್ಲಿಮೆಂಟ್ ಪೂರ್ಣವಾಯಿತು’ ಎಂದು ನೆಹರೂ ಸಂಭ್ರಮಿಸಿದರು. ಎದುರಾಳಿಯ ಸೋಲನ್ನೇ ಬಯಸದ ಅಂದಿನ ರಾಜಕೀಯ ಧುರೀಣರ ನಡೆ, ಎದುರಾಳಿಯ ಸಾವನ್ನು ಬಯಸುವ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಮಾದರಿಯಾಗಬೇಕಿದೆ.