‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಬಗ್ಗೆ ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾದ ಇಸ್ರೇಲ್ನ ನೆದಾವ್ ಲಪಿಡ್ ಅವರು ನೀಡಿದ ಹೇಳಿಕೆಗಾಗಿ ಇಸ್ರೇಲ್ ರಾಯಭಾರಿ ಭಾರತದ ಕ್ಷಮೆ ಕೇಳುವ ಅಗತ್ಯವಿರಲಿಲ್ಲ. ಸಂಪಾದಕೀಯದಲ್ಲಿ ಬರೆದಿರುವಂತೆ (ಪ್ರ.ವಾ., ಡಿ. 1), ಈ ಹೇಳಿಕೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ಹಾಳು ಮಾಡುವಂಥದ್ದಾಗಿರಲಿಲ್ಲ ನಿಜ. ಆದರೆ ಭಾರತವು ಇಸ್ರೇಲಿನಿಂದ ಬಹಳಷ್ಟು ತಂತ್ರಜ್ಞಾನವನ್ನು ಅಮದು ಮಾಡಿಕೊಳ್ಳುತ್ತದೆ. ಬಹುಶಃ ಅಂತಹ ವ್ಯವಹಾರದ ಮೇಲೆ ಈ ಹೇಳಿಕೆ ಏನೂ ಪರಿಣಾಮ ಬೀರದಿದ್ದರೂ ತೆರೆಯ ಹಿಂದಿನ ಮತ್ತು ಸರ್ಕಾರಗಳ ನಡುವೆ ಮಾತ್ರ ನಡೆಯುವ ಒಪ್ಪಂದಗಳು, ವ್ಯವಹಾರಗಳ ಮೇಲೆ ಇದು ದೊಡ್ಡ ಪರಿಣಾಮವನ್ನೇ ಬೀರುತ್ತಿತ್ತೇನೊ. ಅದಕ್ಕಾಗಿಯೇ, ಮುನಿಸಿಕೊಂಡ ಮಗುವನ್ನು ಸಮಾಧಾನಪಡಿಸುವ ರೀತಿಯಲ್ಲಿ ಸರ್ಕಾರದ ಕೋಪವನ್ನು ಬೇಗ ತಣಿಸಲು ಇಸ್ರೇಲಿಗೆ ಈ ಕ್ಷಮೆಯಾಚನೆ ಅನಿವಾರ್ಯವಾಗಿತ್ತು ಅನಿಸುತ್ತದೆ!