‘ನೀ ನನಗಾದರೆ ನಾ ನಿನಗೆ’ ಎನ್ನುವ ಭ್ರಷ್ಟತತ್ವ ರಕ್ಷಾಕವಚವಾಗಿರುವಾಗ, ಬೇಲಿಯೇ ಎದ್ದು ಹೊಲ ಮೇಯುವಂತಹ ರೀತಿಯ ನಾಯಕರು, ಅಧಿಕಾರಿಗಳು, ಗುತ್ತಿಗೆದಾರರು, ದಲ್ಲಾಳಿಗಳು, ಬಾಲಬಡುಕರು ಇರುವಾಗ ಜನಸಾಮಾನ್ಯರು ಏನು ಮಾಡಲು ಸಾಧ್ಯ? ಅವರ ಅಧಿಕಾರ, ಅಂತಸ್ತು, ಹಣದ ದರ್ಪಗಳು ಎಲ್ಲದರ ಬಾಯಿ ಮುಚ್ಚಿಸುತ್ತವೆ. ತಪ್ಪಿತಸ್ಥರು ಯಾರೇ ಇರಲಿ, ನಿಷ್ಠುರವಾಗಿ, ನಿರ್ದಾಕ್ಷಿಣ್ಯವಾಗಿ, ನ್ಯಾಯಯುತವಾಗಿ ಅಂತಹವರಿಗೆ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ಇಂತಹ ಮಾಫಿಯಾಕ್ಕೆ ಸ್ವಲ್ಪಮಟ್ಟಿನ ಕಡಿವಾಣ ಹಾಕಬಹುದು. ಆದರೆ ಕಾನೂನು ಮಾಡುವವರೇ ಅದರಡಿಯಲ್ಲಿ ನುಸುಳಿ ರಕ್ಷಣೆ ಪಡೆದರೆ ಈ ಕೃತ್ಯಗಳಿಗೆ ಅಂತ್ಯ ಹಾಡುವವರು ಯಾರು? ಯಾರು ಇದನ್ನು ಮಟ್ಟಹಾಕಬೇಕು? ನೀವು ನಾವು ಚಿಂತಿಸಬೇಕಾದ ಸಂಗತಿಯಿದು.