ರೈತರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಕೆಲಸ ರಾಜ್ಯದಲ್ಲಿ ಆಗುತ್ತಿಲ್ಲ. ಆ ಕೆಲಸ ಆಗಬೇಕೆಂದರೆ ಶಾಸಕಾಂಗಕ್ಕೆ ಇಚ್ಛಾಶಕ್ತಿ ಇರಬೇಕು, ಕಾರ್ಯಾಂಗದಲ್ಲಿ ದಕ್ಷತೆ ಇರಬೇಕು. ನಮ್ಮಲ್ಲಿ ಅವೆರಡೂ ಅಸಮರ್ಥವಾಗಿವೆ.
ಕಾರ್ಖಾನೆಗಳಿಗೆ ತಾವು ಪೂರೈಕೆ ಮಾಡಿದ ಕಬ್ಬಿನ ಬಾಕಿ ಹಣಕ್ಕಾಗಿ ರೈತರು ಬೀದಿಗಿಳಿದು ಹೋರಾಟ ಮಾಡಿದರೆ, ಸಚಿವರೊಬ್ಬರು ‘ನಮ್ಮಲ್ಲಿ ಹಣದ ಪ್ರಿಂಟಿಂಗ್ ಮೆಷಿನ್ ಇಲ್ಲ’ ಅಂತಾರೆ. ಮತ್ತೊಬ್ಬರು, ‘ನಾಲ್ಕು ವರ್ಷ ನಿದ್ರೆ ಮಾಡುತ್ತಿದ್ದೆಯಾ ತಾಯಿ’ ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಕಾರಣ, ಸಕ್ಕರೆ ಕಾರ್ಖಾನೆಗಳೆಲ್ಲವೂ ರಾಜಕಾರಣಿಗಳು, ಅಥವಾ ಅವರ ಸಂಬಂಧಿಕರ ಅಧೀನದಲ್ಲೇ ಇರುವುದು. ‘ನೀನು ಸತ್ತ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡುತ್ತೇನೆ’ ಎಂಬ ಧೋರಣೆ ಅವರದು.
ರೈತರು ನಾಲ್ಕು ವರ್ಷ ಕಬ್ಬು ಬೆಳೆಯುವುದನ್ನು ನಿಲ್ಲಿಸಿ, ಪರ್ಯಾಯ ಬೆಳೆ ಬೆಳೆಯಲು ಆರಂಭಿಸಬೇಕು. ಅಥವಾ ಕಾರ್ಖಾನೆಗಳಿಂದ ಮುಂಗಡ ಹಣ ಪಡೆದು ಕಬ್ಬು ಬೆಳೆಯಬೇಕು. ಹಾಗೆ ಮಾಡಿದರೆ ಮಾತ್ರ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರಿಗೆ ಬಿಸಿ ತಟ್ಟುತ್ತದೆ.