ತಾನು ನಂಬಿದ ಪುರಾಣಪುರುಷರ ಜೀವನಶೈಲಿಯ ಇಣುಕುನೋಟಕ್ಕೆ ಬಲಿಯಾಗದೆ, ತನ್ನ ನಂಬಿಕೆ, ಶ್ರದ್ಧೆಯಿಂದಲೇ ಅವರನ್ನು ಆರಾಧಿಸುವ ಆಸ್ತಿಕರು ಅತಿ ವಿಚಾರವಂತರ ಇಂತಹ ಮಾತು, ಬರಹಗಳಿಂದ ಯಾವತ್ತೂ ವಿಚಲಿತರಾಗುವುದಿಲ್ಲ. ಅದು ಅವರ ಭಾವ, ಭಕ್ತಿಯ ಗಟ್ಟಿತನ. ಈಗ ನಮಗೆ ಬೇಕಿರುವುದು ದೇವರು, ಧರ್ಮದ ವಿಚಾರವನ್ನು ಕೆದಕಿ ಮಾನವ ಸಂಬಂಧಗಳನ್ನು ಹದಗೆಡಿಸುವ ವಿಚಾರವಂತಿಕೆಯಲ್ಲ. ಬದಲು ಜಾತ್ಯತೀತವಾದ, ಧರ್ಮಾತೀತವಾದ ಕೇವಲ ಮಾನವತೆಯನ್ನು ಸಾರುವ, ಮನುಷ್ಯ ಮನುಷ್ಯರ ನಡುವೆ ಸೌಹಾರ್ದ, ಪ್ರೀತಿ- ವಿಶ್ವಾಸವನ್ನು ಗಟ್ಟಿಗೊಳಿಸುವ ಹೃದಯವಂತಿಕೆ. ಸಾಮಾಜಿಕ, ಆಸ್ತಿಕ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನಗಳು ದೀರ್ಘಕಾಲ ಬಾಳಲಾರವು, ಯಶಸ್ಸನ್ನು ಕಾಣಲಾರವು.