ಆಯಾ ಸ್ನಾತಕೋತ್ತರ ವಿಷಯದ ಮೇಲ್ಪದರದ ವಿವರಗಳನ್ನು ನೆನಪಿಟ್ಟುಕೊಂಡು ಆಯ್ಕೆ ಮಾಡುವ ಬಹುಆಯ್ಕೆ ಮಾದರಿಯ ಪರೀಕ್ಷೆಯನ್ನು ಬಿಟ್ಟು, ಪದವೀಧರರು ಆಯಾ ವಿಷಯವನ್ನು ಎಷ್ಟು ಆಳವಾಗಿ ಅಧ್ಯಯನ ಮಾಡಿದ್ದಾರೆ, ಈ ಓದು, ಅಧ್ಯಯನದ ಪರಿಣಾಮವಾಗಿ ಆಯಾ ವಿಷಯದಲ್ಲಿ ಹೊಸತೇನನ್ನು ಕಂಡುಕೊಂಡಿದ್ದಾರೆ, ಅವರ ಬರಹ, ಸಂಶೋಧನೆಗಳಲ್ಲಿ ತಾವು ಕಲಿತ ಸ್ನಾತಕೋತ್ತರ ಪದವಿಯ ವಿಷಯವನ್ನು ಹೇಗೆ ಸಮಾಜಮುಖಿಯಾಗಿ ಬಳಸಿಕೊಂಡಿದ್ದಾರೆ ಎನ್ನುವುದನ್ನು ಪರೀಕ್ಷಿಸಬೇಕು. ಈ ಎಲ್ಲಾ ಆಯಾಮಗಳನ್ನು ಗುರುತಿಸಲು ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿಯಲ್ಲಿ ಲಿಖಿತ ಪರೀಕ್ಷೆಯನ್ನು ಏರ್ಪಡಿಸಬೇಕು. ಅಂತೆಯೇ 2018ರ ಯುಜಿಸಿ ನಿಯಮಾವಳಿಯ ಪ್ರಕಾರ, ಅಕಾಡೆಮಿಕ್ ಸಂಶೋಧನೆ, ಅಧ್ಯಾಪನ, ಪ್ರಕಟಣೆ, ಸೆಮಿನಾರ್ ಮೊದಲಾದ ಚಟುವಟಿಕೆಗಳಿಗೂ ಅಂಕ ನೀಡಿ, ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಜೊತೆಗೆ ಸೇರಿಸಿ ಶ್ರೇಣಿಯನ್ನು ಪರಿಗಣಿಸಬೇಕು. ಹಾಗಾದಲ್ಲಿ, ಸಮರ್ಥ ಅಧ್ಯಾಪಕರ ಆಯ್ಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ.