ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಶತ್ರುವಿನ ಎರಡು ಕಣ್ಣುಗಳೂ ಹೋಗಲಿ ಎನ್ನುವುದು ಚಾಣಕ್ಯ ನೀತಿ. ಆದರೆ ತನ್ನ ಎರಡು ಕಣ್ಣುಗಳು ಹೋದರೂ ಪರ ವಾಗಿಲ್ಲ ಶತ್ರುವಿನ ಒಂದು ಕಣ್ಣಾದರೂ ಹೋಗಬೇಕು ಎನ್ನುವುದು ಕಾಂಗ್ರೆಸ್ ನೀತಿಯೇ? ಕೇಂದ್ರದಲ್ಲಿ ಬಿಜೆಪಿ ಯನ್ನು ಮಣಿಸಿ ಮತ್ತೆ ಅಧಿಕಾರಕ್ಕೆ ಬರುವ ಬಲ ಹೊಂದಬಹುದಾದ ಏಕೈಕ ಪಕ್ಷ ಕಾಂಗ್ರೆಸ್. ಆ ಪಕ್ಷ ಇದನ್ನು ಅರಿಯದೆ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಂಡು, ಅವುಗಳಿಗೆ ಶರಣಾಗುವ ಹತಾಶ ಸ್ಥಿತಿ ತಲುಪಿರುವು
ದನ್ನು ನೋಡಿ ಪ್ರಜಾಪ್ರಭುತ್ವಪ್ರಿಯರಿಗೆ ಆಘಾತವಾಗಿದೆ. ದೇಶದಾದ್ಯಂತ ತನಗಿರುವ ಬೆಂಬಲವನ್ನು ಈಗಲಾದರೂ ಅರ್ಥ ಮಾಡಿಕೊಂಡು, ಪರ್ಯಾಯ ಆಡಳಿತದ ಜವಾಬ್ದಾರಿ ಹೊರುವ ಪಕ್ಷವಾಗಿ ಕಾಂಗ್ರೆಸ್ ಬಲಗೊಳ್ಳಬೇಕು. ಇಲ್ಲವಾದರೆ, ದೇಶದಲ್ಲಿ ಪ್ರಬಲ ವಿರೋಧ ಪಕ್ಷವೇ ಇಲ್ಲದಂತಾಗಿ, ಒಂದೇ ಪಕ್ಷದ ಕೈಗೆ ಅಧಿಕಾರ ಸಿಕ್ಕುತ್ತಾ ಹೋದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಯಾವುದೂ ಶಾಶ್ವತವಲ್ಲ, ತನಗೆ ಒದಗಿರುವ ಇಂದಿನ ದುಃಸ್ಥಿತಿ ಕೂಡ ಎಂಬುದನ್ನು ಕಾಂಗ್ರೆಸ್ ಅರಿಯಬೇಕು.