ಸ್ವಾರ್ಥ ರಾಜಕಾರಣ, ಹಣ, ಅಧಿಕಾರದ ತಿಕ್ಕಲುತನದಿಂದಾಗಿ ತಮ್ಮನ್ನು ತಾವೇ ಅಡವಿಟ್ಟುಕೊಂಡಿರುವ ಅನರ್ಹ ಶಾಸಕರನ್ನು ಹೋದ ಕಡೆಯಲ್ಲೆಲ್ಲಾ ಮತದಾರರು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಜನರು ಜಾಗೃತಗೊಂಡಿರುವುದರ ಸಂಕೇತ. ಸಮಾಜ ಎಚ್ಚೆತ್ತುಕೊಳ್ಳುತ್ತಿದೆ ಎಂದರ್ಥ.
ಸರ್ಕಾರದ ಬೊಕ್ಕಸಕ್ಕೆ ಅನಗತ್ಯವಾಗಿ ಹೊರೆಯಾಗುವ ಉಪಚುನಾವಣೆಯಿಂದ ಆಗುವ ನಷ್ಟ–ಕಷ್ಟಗಳು ಪ್ರಜೆಗಳಿಗೇ ಹೊರತು ಜನನಾಯಕರಿಗಂತೂ ಯಾವ ಬಿಸಿಯೂ ತಟ್ಟುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯನ್ನೇ ಮೂರಾಬಟ್ಟೆ ಮಾಡಿ, ಈಗ ಅದೇ ಪ್ರಜೆಗಳ ಮುಂದೆ ಕೈ ಜೋಡಿಸಿ ನಾಟಕದ ಮಾತುಗಳನ್ನಾಡುತ್ತಿರುವ ಜನನಾಯಕರೆಂಬ ವ್ಯಾಘ್ರಗಳು ಸಮಾಜಕ್ಕೆ ಎಂದಿದ್ದರೂ ಮಾರಕವೇ.