ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ಈರುಳ್ಳಿಯನ್ನು ಖರೀದಿಸುತ್ತಾರಾದರೂ ಅದು ಮಾರುಕಟ್ಟೆಗೆ ಬರುವ ವೇಳೆಗೆ ಅದರ ಬೆಲೆ ದುಬಾರಿ ಆಗಿರುತ್ತದೆ. ಉತ್ತು ಬಿತ್ತು ಶ್ರಮಪಟ್ಟು ಬೆಳೆಯುವ ರೈತನಿಗೆ ಸಿಗಬೇಕಾದ ಪ್ರತಿಫಲ ಮಧ್ಯವರ್ತಿಗಳಿಗೆ ದಕ್ಕುತ್ತದೆ. ಈ ಅರಿವು ಸರ್ಕಾರಕ್ಕೆ ಇಲ್ಲವೇ? ಕೆ.ಜಿ. ಈರುಳ್ಳಿ ಬೆಲೆ ನೂರು ರೂಪಾಯಿ ದಾಟಿದೆ ಎಂದರೆ, ಮಧ್ಯವರ್ತಿ ಕೃತಕ ಅಭಾವ ಸೃಷ್ಟಿಸಿದ್ದಾನೆ ಎಂದರ್ಥ. ಸರ್ಕಾರವು ಈರುಳ್ಳಿಗೆ ಗರಿಷ್ಠ ಬೆಲೆ ನಿಗದಿ ಮಾಡಿ, ಉಗ್ರಾಣದಲ್ಲಿ ಶೇಖರಣೆಯಾಗಿರುವ ಸರಕನ್ನು ಪತ್ತೆ ಹಚ್ಚಿ, ತುರ್ತಾಗಿ ಗ್ರಾಹಕರ ಹಿತ ಕಾಪಾಡಬೇಕಾಗಿದೆ.