ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಇದು, ಆತಂಕಕಾರಿ ನಡೆ. ತಾವು ಕಷ್ಟಪಟ್ಟು ಉಳಿಸಿದ ಹಣವನ್ನುಸಣ್ಣ ಉಳಿತಾಯಗಳಲ್ಲಿ ಠೇವಣಿ ಇಡುವವರು ಸಾಮಾನ್ಯವಾಗಿ ಹಿರಿಯ ನಾಗರಿಕರಾಗಿರುತ್ತಾರೆ. ಇವರಿಗೆ ಈ ಹಣದ ಹೊರತಾಗಿ ಜೀವನ ನಿರ್ವಹಣೆಗೆ ಬೇರಾವ ಸಂಪನ್ಮೂಲಗಳೂ ಇರುವುದಿಲ್ಲ. ಹೀಗಾಗಿ, ತಮ್ಮ ನಿವೃತ್ತಿಯ ನಂತರ ಬಂದ ಇಡುಗಂಟನ್ನು ಸಣ್ಣ ಉಳಿತಾಯಗಳಲ್ಲಿ ತೊಡಗಿಸುವ ಈ ಮಧ್ಯಮ ವರ್ಗದ ಜನ, ಅದರ ಮೂಲಕವೇ ತಮ್ಮ ಬದುಕಿನ ರಥವನ್ನು ಕಷ್ಟದಿಂದಲೇ ಎಳೆಯುತ್ತಾರೆ. ಅಂಚೆ ಕಚೇರಿಯ ಉಳಿತಾಯ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದವು ಸಣ್ಣ ಉಳಿತಾಯ ಯೋಜನೆ ಅಡಿ ಬರುತ್ತವೆ.