ಕೊರೊನಾ ಸೋಂಕು ಹೆಚ್ಚಾದಾಗ ಪ್ರತಿಸಲ ಲಾಕ್ಡೌನ್ ಹೇರಲಾಗದು. ಎಲ್ಲರನ್ನೂ ತಿಂಗಳುಗಟ್ಟಲೆ ಮನೆಯಲ್ಲಿಯೇ ಇರುವಂತೆ ನಿರ್ಬಂಧ ವಿಧಿಸುವುದಕ್ಕೆ ಸಾಧ್ಯವಿಲ್ಲ. ಜನರು ಜವಾಬ್ದಾರಿ ಅರಿತು ನೆರೆಹೊರೆಯಲ್ಲಿ ಜಾಗೃತಿ ಮೂಡಿಸಬೇಕು. ಸೋಂಕು ಕ್ಷೀಣಿಸುತ್ತಿದ್ದಂತೆ ಮಾಸ್ಕ್ ಧರಿಸದೇ ಇರುವುದು, ಅಂತರ ಕಾಯ್ದುಕೊಳ್ಳದೇ ಇರುವುದು ಸರಿಯಲ್ಲ. ಕೊರೊನಾ ವೈರಸ್ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎನ್ನುವುದನ್ನು ಮರೆಯ ಬಾರದು. ಈ ಎಲ್ಲಕ್ಕಿಂತ ಮುಖ್ಯವಾಗಿ, ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವ ಮನಃಸ್ಥಿತಿಯಿಂದ ಹೊರ ಬಂದು, ‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎನ್ನುವುದನ್ನು ಅರಿಯಬೇಕು.