ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಪರೀಕ್ಷೆಗಳನ್ನು ನಡೆಸಿ ಹಲವು ತಿಂಗಳುಗಳೇ ಕಳೆದರೂ ಫಲಿತಾಂಶ ಪ್ರಕಟಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಕೆಪಿಎಸ್ಸಿ ಕಚೇರಿ ಮುಂದೆ ಜಮಾಯಿಸಿದ ಉದ್ಯೋಗ ಆಕಾಂಕ್ಷಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಪೋಲಿಸರ ವರ್ತನೆ ಖಂಡನೀಯ. ಉದ್ಯೋಗ ಆಕಾಂಕ್ಷಿಗಳ ಬೇಡಿಕೆ ಸರಿಯಾದುದು. ರಾಜಕಾರಣಿಗಳಿಗೆ ಯಾವುದೇ ವಯೋಮಿತಿ ಇಲ್ಲ. ಆದರೆ, ಉದ್ಯೋಗ ಬಯಸುವ ಆಕಾಂಕ್ಷಿಗಳಿಗೆ ವಯೋಮಿತಿ ಇದೆ. ಪರೀಕ್ಷೆ ಬರೆದು ವರ್ಷಗಟ್ಟಲೆ ಕಾಯುವುದು ಯಾವುದೇ ಆಕಾಂಕ್ಷಿಗೆ ಅತ್ಯಂತ ವೇದನೆಯ ಕೆಲಸ. ಜತೆಗೆ ಅತಂತ್ರ ಸ್ಥಿತಿ. ಕೆಪಿಎಸ್ಸಿ ಒಂದು ಸ್ವಾಯತ್ತ ಸಂಸ್ಥೆ. ನೇಮಕಾತಿ ಪ್ರಕ್ರಿಯೆಯನ್ನುಕಾಲಮಿತಿಯೊಳಗೆ ಪೂರ್ಣಗೊಳಿಸುವುದು ಅದರ ಆದ್ಯ ಕರ್ತವ್ಯ. ವಿನಾಕಾರಣ ವಿಳಂಬವಾದರೆ ಅದನ್ನು ಪ್ರಶ್ನಿಸುವ ಹಕ್ಕು ನಾಗರಿಕರಿಗೆ ಇದೆ.