ಕುವೆಂಪು, ಬೇಂದ್ರೆ, ಪುತಿನ, ಕೆಎಸ್ನ, ಅಡಿಗರು ಇವರೆಲ್ಲಾ ಕನ್ನಡದ ವಿವೇಕವನ್ನು ಕಟ್ಟಿದಂಥ ನಮ್ಮ ಪ್ರಜ್ಞೆಯ ಪ್ರಮುಖ ಕವಿಗಳು. ಕನ್ನಡದ ಬದುಕು ರೂಪಿಸಿಕೊಳ್ಳುತ್ತಲೇ ಬಂದ ಪರಂಪರೆ, ಸಂಸ್ಕೃತಿಯ ಎಲ್ಲ ಅವಯವಗಳ ಕುರಿತು ಅವರಿಗೆ ವಿಶಿಷ್ಟವಾದ ಜ್ಞಾನವಿತ್ತು. ಅಷ್ಟೇಅಲ್ಲ, ಅಲ್ಲಿರುವ ಊನಗಳ ಕುರಿತು ಕೂಡ ಅವರಿಗೆ ಕೆಲವು ಪ್ರಶ್ನೆಗಳಿದ್ದವು. ಆ ತಕರಾರುಗಳನ್ನು ಅವರು ತಮ್ಮ ಕಾವ್ಯದಲ್ಲಿಯೇ ಮೂಡಿಸಿದ್ದಾರೆ. ಇವರ ಬರಹಗಳಲ್ಲಿ ಭಾಷೆಯ ಚೆಲುವು, ಸೊಬಗು ಅಷ್ಟೇಅಲ್ಲ, ಸಂಸ್ಕೃತಿ, ಸಮುದಾಯಗಳ ಬಾಳ ಚೆಲುವು ಕೂಡ ಹರಡಿಕೊಂಡಿದೆ. ದುಡಿಯುವ ಸಂಸ್ಕೃತಿ,ಮಾನವನ ಅಭ್ಯುದಯ, ಮಾನವೀಯ ಗುಣಗಳ ಸಹಕಾರದ ಕುರಿತು ಅವರ ಕಾವ್ಯದ ತುಡಿತ ಇದೆ. ಇದೆಲ್ಲವನ್ನೂ ಬಿಟ್ಟು ಕವಿಯನ್ನು ಜಾತಿ, ವರ್ಗ, ವರ್ಣಕ್ಕೆ ಅನ್ವಯಿಸಿಕೊಂಡು ವಿಮರ್ಶಿಸುವಂತಹ ತಾಲಿಬಾನಿ ಗುಣವನ್ನು ರಘುನಾಥ ಚ.ಹ. ಅವರು ಸರಿಯಾಗಿ ಗುರುತಿಸಿ, ಚರ್ಚಿಸಿದ್ದಾರೆ (ಪ್ರ.ವಾ., ಆ. 25).