ಕೋವಿಡ್- 19 ಸೋಂಕು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಪೆಟ್ಟು ನೀಡಿರುವುದನ್ನು ಗಂಭೀರವಾಗಿ ಅರಿತ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಿ, ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಅಗತ್ಯ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಕಲ್ಪನೆಯು ವೈಜ್ಞಾನಿಕ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾದ ಮಾದರಿಯಾಗಿದೆ. ಇದು ಶೈಕ್ಷಣಿಕ ವರ್ಷಾಂತ್ಯದಲ್ಲಿ ಮಗುವು ಮುಂದಿನ ತರಗತಿಗೆ ಆತ್ಮವಿಶ್ವಾಸ, ನಿರ್ದಿಷ್ಟ ಗುರಿ, ಕೌಶಲ ಹಾಗೂ ಉತ್ತಮ ಕಲಿಕಾಫಲಗಳೊಂದಿಗೆ ಮುನ್ನಡೆಯಲು ಸಹಕಾರಿಯಾಗಲಿದೆ.