ನಮ್ಮೂರ ಜೀವನಾಡಿ ತುಂಗಭದ್ರೆಯನ್ನು ನೋಡಲು ಹೋದಾಗ, ದಡದಲ್ಲಿ ಅಸ್ಥಿ ಮಡಕೆಯೊಂದು ಅನಾಥವಾಗಿ ಬಿದ್ದಿತ್ತು. ಕೆಲವರು ಇಂತಹ ಮಡಕೆಗಳನ್ನು ಕಂಡೊಡನೆ ಕೆರಳಿ, ಅನಿಷ್ಟವೆಂದು ತಿಳಿದು ಒಡೆಯುತ್ತಾರೆ. ಆದರೆ ಅದರ ಹರಿತ ಚೂರುಗಳು ಎಷ್ಟೋ ಬಾರಿ ಚಪ್ಪಲಿ ಮೆಟ್ಟಿರದ ಕೃಷಿ ಕಾರ್ಮಿಕರಿಗೆ ಮತ್ತು ಇತರರಿಗೆ ನೆಟ್ಟು ಗಾಯಗೊಳಿಸುತ್ತವೆ. ಈ ಅಪಾಯವನ್ನು ತಪ್ಪಿಸಲು, ಅದನ್ನು ತೆಗೆದುಕೊಂಡು ದೂರದಲ್ಲಿದ್ದ ಮುಳ್ಳುಕಂಟಿಯೊಳಗೆ ಸಿಲುಕಿಸಿ ಬಂದೆ. ಮುಂದೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡಲು ಅನುಕೂಲವಾಗಬಹುದೆಂದು ಯೋಚಿಸಿದ್ದೆ. ಕೆಲ ದಿನಗಳ ನಂತರ ಅದೇ ದಾರಿಯಲ್ಲಿ ನಡೆಯುತ್ತಿರುವಾಗ ಕುತೂಹಲಕ್ಕೆ ಮಡಕೆಯೊಳಗೆ ಇಣುಕಿದೆ. ಚಿಟ್ಟು ಮಡಿವಾಳ (Indian Robin) ಹಕ್ಕಿಯೊಂದು ಅದರಲ್ಲಿ ಗೂಡು ಕಟ್ಟುತ್ತಿತ್ತು! ದಿನಗಳುರುಳಿದಂತೆ ಮೊಟ್ಟೆಗಳೊಡೆದು ಮರಿಗಳು ಬೆಳೆದು ಬಾನಲ್ಲಿ ತೇಲಿಹೋಗುವುದನ್ನು ಮನಸಾರೆ ಕಣ್ತುಂಬಿಕೊಂಡೆ.