ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರು ಅರ್ಜಿ ಹಾಕುವ ಅನಿವಾರ್ಯವಿತ್ತು. ಎಷ್ಟೋ ಮಂದಿ ಗ್ರಾಮೀಣ ಭಾಗದ ಮುಗ್ಧ ಅನಕ್ಷರಸ್ಥ ಪ್ರತಿಭಾನ್ವಿತರಿಗೆ ಅರ್ಜಿ ಸಲ್ಲಿಸುವ ವಿಧಾನವೇ ತಿಳಿದಿರಲಿಲ್ಲ. ಇದರಿಂದಾಗಿ ಜನಪದ, ರಂಗಭೂಮಿ, ಇನ್ನಿತರ ಕ್ಷೇತ್ರಗಳ ಸಾಧಕರು ಪ್ರಶಸ್ತಿಯಿಂದ ವಂಚಿತರಾಗುತ್ತಿದ್ದರು. ಇನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಾಗಿ ತೀವ್ರ ಸೆಣಸಾಟವೇ ನಡೆಯುತ್ತಿತ್ತು. ಈಗ ಸರ್ಕಾರ ಇಂತಹ ಸಮಸ್ಯೆಗಳನ್ನು ಮನಗಂಡು ಆಯ್ಕೆ ಸಮಿತಿಯ ಮೂಲಕ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ. ಬಹುಮಾನದ ಮೊತ್ತವನ್ನು ಹೆಚ್ಚಿಸಿರುವುದಲ್ಲದೆ, ವಯೋಮಿತಿ ನಿಯಮವನ್ನು ಸಡಿಲಿಸಿರುವುದು ಅಭಿನಂದನಾರ್ಹ.