ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್ಡಿಎಂಸಿ) ರಚನೆಯ ನೈಜ ಆಶಯವೇ ಶಾಲಾ ಅಭಿವೃದ್ಧಿಗೆ ಶ್ರಮಿಸುವುದು ಹಾಗೂ ಕಲಿಕಾ ಚಟುವಟಿಕೆಗಳ ಮೇಲುಸ್ತುವಾರಿಯೇ ಆಗಿದೆ. ಆದರೆ ಪ್ರಸ್ತುತ ಶಾಲೆಗಳಲ್ಲಿನ ಬಹುತೇಕ ಎಸ್ಡಿಎಂಸಿಗಳು ರಾಜಕೀಯಪ್ರೇರಿತವಾಗಿ ಇಂತಹ ನೈಜ ಆಶಯಕ್ಕೆ ಧಕ್ಕೆ ತರುತ್ತಿರುವುದು ಆತಂಕದ ಸಂಗತಿ. ಈ ಕುರಿತು ಅರವಿಂದ ಚೊಕ್ಕಾಡಿ ಅವರ ಲೇಖನ (ಪ್ರ.ವಾ., ಮಾರ್ಚ್ 2 ) ವಾಸ್ತವ ಸಂಗತಿಗಳನ್ನು ಅನಾವರಣಗೊಳಿಸಿದೆ. ಈಗಿನ ಎಸ್ಡಿಎಂಸಿಗಳಲ್ಲಿ ಶೇಕಡ 50ರಷ್ಟು ಸಮಿತಿಗಳು ಶಾಲಾ ಪ್ರಗತಿಗೆ ಅವಿರತ ಶ್ರಮಿಸಿ, ಅಗತ್ಯ ಬೆಂಬಲ ನೀಡುತ್ತಿದ್ದರೆ, ಇನ್ನುಳಿದವು ಮುಖ್ಯಗುರುಗಳಿಗೆ, ಶಿಕ್ಷಕರಿಗೆ ಕಿರುಕುಳ ನೀಡುತ್ತಾ ಅಧಿಕಾರದ ದರ್ಪ ಮೆರೆಯುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ. ಹಣ ದುರ್ಬಳಕೆಯಂತಹ ಗಂಭೀರ ಅಪರಾಧಕ್ಕಾಗಿ ಸಾವಿರಾರು ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಗತಿಯೂ ಇತ್ತೀಚೆಗಷ್ಟೇ ವರದಿಯಾದದ್ದನ್ನು ಗಮನಿಸಿದ್ದೇವೆ.