ಅದರಲ್ಲೂ ತಾನು ಜನಪರ ಎಂದು ಹೇಳುವ ಬಿಜೆಪಿ ಪಕ್ಷದಲ್ಲೇ ಹೆಚ್ಚು ಆರೋಪಿಗಳಿರುವುದು ವಿಷಾದದ ಸಂಗತಿ. ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳು ತಮ್ಮ ವಿರುದ್ಧದ ಸಾಕ್ಷ್ಯಗಳನ್ನೇ ನಾಶ ಮಾಡಿ ನ್ಯಾಯಾಲಯದಿಂದಲೇ ನಿರ್ದೋಷಿಗಳಾಗಿ ಹೊರಬರುವಷ್ಟು ಪ್ರಬಲರು. ಇದು ಆತಂಕಕಾರಿ ವಿಚಾರ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಾಗ ಇಂತಹ ಎಲ್ಲ ಆರೋಪ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದರೆ ಜನಪ್ರತಿನಿಧಿ ಸ್ಥಾನಕ್ಕೆ ಗೌರವ ಬರುವುದು. ಗೆಲುವನ್ನಷ್ಟೇ ಮಾನದಂಡ ಮಾಡಿಕೊಂಡಿರುವ ಎಲ್ಲ ಪಕ್ಷಗಳೂ ಹಿಂದೆಮುಂದೆ ನೋಡದೆ ಹಣಬಲ, ತೋಳ್ಬಲ ಇರುವಂತಹವರಿಗೆ ಟಿಕೆಟ್ ನೀಡುತ್ತಿರುವುದೇ ಈ ಸ್ಥಿತಿಗೆ ಕಾರಣ. ಇಂತಹವರು ಆರಿಸಿ ಬಂದರೆ ಯಾವ ರೀತಿ ದೇಶಸೇವೆ ಮಾಡಬಹುದು ಎಂದು ಊಹಿಸಿಕೊಳ್ಳಬಹುದು. ಸದನದಲ್ಲೇ ಬಟ್ಟೆ ಹರಿದುಕೊಂಡು ಕೂಗಾಡುವ, ತೋಳೇರಿಸಿ ಕೊಂಡು ಅನ್ಯ ಸದಸ್ಯರ ಮೇಲೆ ಎರಗುವ, ತುಚ್ಛ ಶಬ್ದಗಳಿಂದ ಪರಸ್ಪರ ಬೈದಾಡುವ, ನೀಲಿಚಿತ್ರಗಳನ್ನು ವೀಕ್ಷಿಸುವ ಸದಸ್ಯರು ಬೇಡವೆಂದು ಬಯಸುವ ಪಕ್ಷಗಳು ಎಚ್ಚರಿಕೆಯಿಂದ ಟಿಕೆಟ್ ನೀಡುವ ಪರಿಪಾಟ ಬೆಳೆಸಿಕೊಳ್ಳಲಿ.