ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಾರಂಭಿಸಿರುವ ‘ವಾರಾಂತ್ಯದ ಪ್ಯಾಕೇಜ್ ಪ್ರವಾಸ’ವು ಶ್ರೀಸಾಮಾನ್ಯರನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಒಂದು ಜನಪರ ಕಾರ್ಯಕ್ರಮ. ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಒದಗುವ ಪ್ರವಾಸ ಇದಾಗಿದೆ. ಆಯಾ ಪ್ರದೇಶದ ಪ್ರವಾಸಿತಾಣಗಳು, ಅದರಲ್ಲೂ ಉತ್ತಮ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಜಲಪಾತದ ವೀಕ್ಷಣೆಗೆ ಈ ಕಾರ್ಯಕ್ರಮ ಅನುವು ಮಾಡಿಕೊಡುವುದಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ, ದೇವಸ್ಥಾನಗಳ ವೀಕ್ಷಣೆಗೆ ಸಹ ಅನುಕೂಲ ಆಗಲಿದೆ.
ಒಂದು ದಿನದ ಪ್ರವಾಸ ಇದಾಗಿರುವುದರಿಂದ ಹೆಚ್ಚಿನ ತಯಾರಿ, ಲಗೇಜ್, ಗೋಜಲು ಗೊಂದಲಗಳ ತಾಪತ್ರಯ ಇರುವುದಿಲ್ಲ. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಆಯೋಜಕರ ಸಿದ್ಧತೆ ಎಷ್ಟು ಮುಖ್ಯವೋ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರ ಗುಂಪು ಶಿಸ್ತು ಮತ್ತು ಸಮಯ ಪರಿಪಾಲನೆಯೂ ಅಷ್ಟೇ ಮುಖ್ಯ.