ಹಿಂದಿನ ದಶಕಗಳ ಅಧ್ಯಕ್ಷರುಗಳನ್ನು ನೋಡಿದರೆ ಸಾಹಿತಿ, ಬರಹಗಾರರು, ಪತ್ರಕರ್ತರು ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧೆಗೆ ಇಳಿಯುವ ಅನೇಕರಲ್ಲಿ ಸಾಹಿತ್ಯದ ಆಸಕ್ತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕಾದಂತಹ ಸ್ಥಿತಿ ಇದೆ. ರಾಜಕೀಯ ಕ್ಷೇತ್ರದ ಚುನಾವಣೆಗಳಂತೆ ಪಕ್ಷ, ಕಾರ್ಯಕರ್ತ, ರಾಜಕಾರಣಿಗಳ ಬೆಂಬಲ, ಮಠಾಧೀಶರ ಆಶೀರ್ವಾದದಂತಹ ರೀತಿಯಲ್ಲಿ ಚುನಾವಣೆ ನಡೆಯದೆ, ಕೊನೇಪಕ್ಷ ಅಭ್ಯರ್ಥಿಗಳು ಸಾಹಿತ್ಯದ ಕನಿಷ್ಠ ಓದಿನ ಅರ್ಹತೆಯನ್ನು ಹೊಂದಿದ್ದರೆ, ಸಾಹಿತ್ಯದ ಸಾಧ್ಯತೆಗಳನ್ನು ನಾಡಿಗೆ ನೀಡಬಲ್ಲರು. ಸಾಹಿತ್ಯ ಪರಿಷತ್ತಿನ ಘನತೆಯನ್ನು ಹೆಚ್ಚಿಸಬಲ್ಲರು. ಈ ದಿಸೆಯಲ್ಲಿ ಮತದಾರರ ಆಯ್ಕೆಯೂ ಸಾಹಿತ್ಯದ ಒಲವಿರುವವರ ಕಡೆ ಇರಲಿ.