ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಪ್ರಾರಂಭಿಸಲು ನಿರ್ಧರಿಸಿರುವುದು ಸರಿಯಲ್ಲ. ನಗರದ ಕಸ ನಿರ್ವಹಣೆಯನ್ನೂ ಮಾಡಲಾರದ ಪಾಲಿಕೆ ತನ್ನ ಮೂಲಭೂತ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರ ಇದಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರೂಪಿಸಿ ಅದರಲ್ಲಿ ಮಿಷನ್ ಬೆಂಗಳೂರು– 2022 ಹೆಸರಿನಲ್ಲಿ ಬೆಂಗಳೂರಿನ ಕಸ ನಿರ್ವಹಣೆಗೆ ಪ್ರತ್ಯೇಕ ಸಾಂಸ್ಥಿಕ ರೂಪ ನೀಡುವ ಪ್ರಸ್ತಾಪವನ್ನು ಇಟ್ಟಿತ್ತು. ಕಸ ನಿರ್ವಹಣೆಗೆ ಈಗ ವಿಧಿಸುವ ಸೆಸ್ ಜೊತೆ ಮನೆಯ ವಿದ್ಯುತ್ ಮೀಟರ್ ಸಂಖ್ಯೆಯ ಆಧಾರದಲ್ಲಿ ಮೀಟರ್ ಒಂದಕ್ಕೆ ₹ 200 ಶುಲ್ಕ ವಿಧಿಸುವ ಪ್ರಸ್ತಾಪವೂ ಇತ್ತು. ಜನಸಾಮಾನ್ಯರ ಬದುಕಿನ ಕಷ್ಟ ಗೊತ್ತಿರುವ ಹಲವರು ಇದನ್ನು ವಿರೋಧಿಸಿದ್ದರು. ಶುಲ್ಕ ವಿಧಿಸುವುದನ್ನು ತಾತ್ಕಾಲಿಕವಾಗಿ ಮುಂದೂಡುವ ಹೇಳಿಕೆ ಬಂದಿತ್ತು. ಆದರೆ ಈಗಿನ ಪ್ರಸ್ತಾಪ ಮೇಲ್ನೋಟಕ್ಕೆ ಬಹಳ ಆಕರ್ಷಕ ಎನಿಸುತ್ತಿದೆಯಾದರೂ ಬಿಬಿಎಂಪಿಯಿಂದ ಕಂಪನಿಯ ಹಿಡಿತಕ್ಕೆ ಕೊಡುವುದೆಂದರೆ ಜನಸಾಮಾನ್ಯರ ಮೇಲೆ ಹೊರೆ ಹೊರಿಸುವುದೇ ಆಗಿದೆ.