ಅಧಿಕ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಾಗ, ಸಂಸಾರ ತಾಪತ್ರಯದ ಮಧ್ಯೆಯೂ ಅದೆಷ್ಟೋ ತಾಯಂದಿರು, ಸಹೋದರಿಯರು ಕೂಡಿಟ್ಟಿದ್ದ ಅಷ್ಟೋಇಷ್ಟೋ ಹಣವನ್ನು ಏನು ಮಾಡಬೇಕೆಂದು ತೋಚದೆ ತೊಳಲಾಡಿದ್ದನ್ನು ನೋಡಿದ್ದೇವೆ. ಇದಕ್ಕೆ ಕಾರಣ, ಅವರು ತಮ್ಮ ಉಳಿತಾಯಕ್ಕಾಗಿ ಬ್ಯಾಂಕಿಂಗ್ ಸೇವೆಯ ಮೊರೆ ಹೋಗದೆ ಮನೆಯ ಮಡಕೆ, ಕುಡಿಕೆಯನ್ನು ಅವಲಂಬಿಸಿದ್ದುದು. ಈ ಬಗೆಯ ಉಳಿತಾಯ ಅಸುರಕ್ಷಿತವೆಂದು ತಿಳಿದಿದ್ದರೂ ಅದು ಅವರಿಗೆ ಅನಿವಾರ್ಯವಾಗಿತ್ತು. ಏಕೆಂದರೆ ಬ್ಯಾಂಕಿಗೆ ಹೋಗಲು ಮುಜುಗರ, ಬ್ಯಾಂಕ್ ಸಿಬ್ಬಂದಿಯ ಅರ್ಥವಾಗದ ಭಾಷೆ, ಕೆಲವರ ಅನುಚಿತ ವರ್ತನೆ.