ಮದುವೆ ಮಾಡುವುದೆಂದರೆ ಅಳೆದೂತೂಗಿ ಮುಹೂರ್ತ ನಿರ್ಧರಿಸಲಾಗುತ್ತದೆ. ಹೆಚ್ಚಿನ ಮದುವೆಗಳು ಹಗಲಿನಲ್ಲಿ ನಡೆಯುತ್ತವೆ. ಆದರೆ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಮಧ್ಯರಾತ್ರಿ ಅಥವಾ ಬೆಳಗಿನ ಜಾವ ಕತ್ತಲಲ್ಲಿ ವಧುವಿನ ಕೊರಳಿಗೆ ತಾಳಿ ಕಟ್ಟಿ ಸಾಗಹಾಕುವ ಕೆಲಸ ನಡೆಯುತ್ತಿದೆ. ಕಾರಣ ಇಷ್ಟೆ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಈ ಭಾಗದಲ್ಲಿ ಬಹಳಷ್ಟು ಜಾತ್ರೆಗಳಲ್ಲಿ ಸಾಮೂಹಿಕ ಮದುವೆಗಳನ್ನು ನಡೆಸಲಾಗುತ್ತದೆ. ಅಪ್ರಾಪ್ತ ವಯಸ್ಕರ ಮದುವೆ ತಡೆಗಟ್ಟುವ ದಿಸೆಯಲ್ಲಿ ನಿರ್ಬಂಧಗಳಿವೆ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಕೆಲ ಪಾಲಕರು, ಬೆಳಗಾಗುವುದರೊಳಗೆ ಅಪ್ರಾಪ್ತ ವಯಸ್ಕ ಮಕ್ಕಳ ‘ಮದುವೆ ಶಾಸ್ತ್ರ’ ಮುಗಿಸುತ್ತಿರುವ ಪ್ರಕರಣಗಳಿಗೂ ಕೊರತೆ ಇಲ್ಲ.