ಕೊರೊನಾ ಸಂಕಷ್ಟದ ಈ ಸಮಯದಲ್ಲಿ ವೈದ್ಯರ ಅವಶ್ಯಕತೆ ಎಂದಿಗಿಂತಲೂ ಈಗ ಹೆಚ್ಚಾಗಿದೆ. ವೈದ್ಯರು ಕೂಡ ತಮ್ಮ ಸೇವೆಯನ್ನು ಅಷ್ಟೇ ನಿಷ್ಠೆಯಿಂದ ಮಾಡುತ್ತಿದ್ದಾರೆ. ಹೀಗಿರುವಾಗ, ಹದಿನಾರು ತಿಂಗಳಿನಿಂದ ಶಿಷ್ಯವೇತನ ನೀಡಿಲ್ಲ ಎಂದು ದಾವಣಗೆರೆಯ ಜೆ.ಜೆ.ಎಂ. ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದಾರೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಈ ವೈದ್ಯ ವಿದ್ಯಾರ್ಥಿಗಳಿಲ್ಲದೇ ಇದ್ದಿದ್ದರೆ ವೈದ್ಯರ ಕೊರತೆ ಎದುರಾಗುತ್ತಿತ್ತು. ಸರ್ಕಾರ ಮತ್ತು ವೈದ್ಯ ವಿದ್ಯಾರ್ಥಿಗಳ ನಡುವೆ ಯಾವುದೇ ಮುಸುಕಿನ ಗುದ್ದಾಟವಿದ್ದರೂ ಸರ್ಕಾರ ಇಂತಹ ಸಮಯದಲ್ಲಿ ವೈದ್ಯರನ್ನು ನಿರ್ಲಕ್ಷಿಸುವುದು ಸರಿಯಲ್ಲ. ವೈದ್ಯ ವಿದ್ಯಾರ್ಥಿಗಳ ಸೇವೆಯನ್ನು ಮಾತ್ರ ಬಳಸಿಕೊಳ್ಳುವ ಸರ್ಕಾರ, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಶಿಷ್ಯವೇತನ ನೀಡಲು ಸತಾಯಿಸುವುದು ಯಾವ ನ್ಯಾಯ?