ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ಸ್ವಾಗತ ಸಮಾರಂಭದಲ್ಲಿ, ಸಚಿವ ಸಿ.ಟಿ.ರವಿ ಅವರು ‘ಮನೆಹಾಳರು’ ಎಂಬ ಪದವನ್ನು ಬಳಸಿದ್ದು, ಮನಸ್ಸನ್ನು ಮುರಿಯುವ ಮನೋಧರ್ಮ ಮತ್ತು ಅಂಥ ವ್ಯಕ್ತಿಗಳ ವಿರುದ್ಧವಾಗಿತ್ತೇ ವಿನಾ ಸಾಹಿತಿಗಳನ್ನು ಕುರಿತದ್ದಾಗಿರಲಿಲ್ಲ. ಆದರೆ, ಅದು ಸಾಹಿತಿಗಳು ಹಾಗೂ ಕಲಾವಿದರನ್ನು ಕುರಿತದ್ದು ಎಂದು ಕೆಲವರು ಹೇಳುತ್ತಿರುವುದು ಸತ್ಯವೇ ಎಂಬುದರ ಬಗ್ಗೆ ಪರಾಮರ್ಶೆಗಳು ನಡೆಯಲಿ. ವಿರೋಧಕ್ಕಾಗಿ ವಿರೋಧ, ಪರಕ್ಕಾಗಿ ಪರ ನಡೆದರೆ ಅದು ಸಂಸ್ಕೃತಿ ಆಗದು. ಅದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಮತ್ತೊಂದು ವಾಗ್ವಾದದಂತಾಗುತ್ತದೆ.