ನಮ್ಮ ತಲೆಮಾರಿನವರಲ್ಲಿ ಹೆಚ್ಚಿನವರು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಆಗ ನಮ್ಮ ಮೇಷ್ಟ್ರುಗಳು ದಿನವೂ ಮಧ್ಯಾಹ್ನದ ನಂತರ ಒಂದು ಪೀರಿಯಡ್ನಲ್ಲಿ ನಮಗೆಲ್ಲ ಕತೆಗಳನ್ನು ಹೇಳುತ್ತಿದ್ದರು. ಅವು ಪಂಚತಂತ್ರ, ರಾಮಾಯಣ, ಮಹಾಭಾರತ, ಈಸೋಪ, ಅರೇಬಿಯನ್ ನೈಟ್ಸ್, ಜಾನಪದ ಹೀಗೆ ಹಲವು ಮೂಲಗಳದ್ದಾಗಿದ್ದವು. ಕೆಲವೊಮ್ಮೆ ಹಾಡುಗಳ ರೂಪದಲ್ಲೂ ನಮಗೆ ನೀತಿ, ಸಂದೇಶವನ್ನು ರವಾನಿಸಲಾಗುತ್ತಿತ್ತು. ನಮಗೆ ಇದ್ದ ದೈಹಿಕ ಶಿಕ್ಷಣ ಶಿಕ್ಷಕರು ಕೆಲವು ಆಟಗಳ ಮೂಲಕ ಹಿಂಸೆ, ಅಹಿಂಸೆಗೆ ಸಂಬಂಧಿಸಿದ ಸಂದೇಶಗಳನ್ನು ದಾಟಿಸು ತ್ತಿದ್ದರು. ನಾವೂ ನಮಗೆ ದಕ್ಕಿದಷ್ಟನ್ನು ಜಾತಿ, ಧರ್ಮ, ಪಂಗಡಗಳನ್ನೆಲ್ಲ ನೋಡದೆ ಕಲಿತುಕೊಂಡೆವು. ಪುಟ್ಟ ಮಕ್ಕಳ ಮನಸ್ಸು ಕೋಮಲವಾಗಿರುತ್ತದೆ. ಆ ವಯಸ್ಸಿನಲ್ಲೇನಿದ್ದರೂ ಸರಳವಾದ ಕತೆಗಳು, ಲಯಬದ್ಧ ಪದ್ಯಗಳು ಚೆನ್ನಾಗಿ ಹಿಡಿಸುತ್ತವೆ. ಶ್ಲೋಕಗಳನ್ನೇನಿದ್ದರೂ ಬಾಯಿಪಾಠ ಮಾಡಬಹುದಷ್ಟೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಭಗವದ್ಗೀತೆ, ಕುರಾನ್, ಬೈಬಲ್ನಂತಹ ಭಾರವಾದ ಗ್ರಂಥಗಳು ಬೇಕಾಗಿಲ್ಲ. ಬದುಕಿನಲ್ಲಿ ಧರ್ಮ, ಅಧ್ಯಾತ್ಮ, ತತ್ವಜ್ಞಾನ, ಹುಟ್ಟು, ಸಾವು, ಮೋಕ್ಷದಂತಹವುಗಳ ಬಗ್ಗೆ ಕುತೂಹಲ, ಜಿಜ್ಞಾಸೆ ಶುರುವಾದಾಗ ಬೇಕಾಗುವ ಗ್ರಂಥಗಳಿವು.