ಮೈಸೂರಿನಲ್ಲಿ ಕೋವಿಡ್– 19 ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದವರಲ್ಲಿ ಕೆಲವರು ಆಸ್ಪತ್ರೆಗೆ ಬೇಕಾದ ಬಿಸಿನೀರಿನ ಉಪಕರಣ, ಎನ್– 95 ಮಾಸ್ಕ್ನಂತಹ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ರಾಜ್ಯದಲ್ಲಿ ಇಲ್ಲಿಯವರೆಗೂ ಸಾವಿರಾರು ಕೋವಿಡ್ ರೋಗಿಗಳು ಗುಣಮುಖರಾಗಿದ್ದು, ಅವರಲ್ಲಿ ಆರ್ಥಿಕವಾಗಿ ಸದೃಢರಾದವರೂ ಇರುತ್ತಾರೆ. ಅಂತಹವರು ಅಲ್ಲಿನ ಆಸ್ಪತ್ರೆಯಲ್ಲಿ ಬಡ ರೋಗಿಗಳ ಆರೈಕೆಗೆ ಬೇಕಾಗುವ ಇಂತಹ ಅವಶ್ಯಕ ವಸ್ತುಗಳನ್ನು ಒದಗಿಸಿಕೊಡಬೇಕು. ಇದರಿಂದ ಇತರ ಕೋವಿಡ್ ರೋಗಿಗಳಿಗೆ ಹೆಚ್ಚಿನ ಅನುಕೂಲ ಆಗುತ್ತದೆ.