ಕಾಲ ಉರುಳಿದಂತೆ ಆಚರಣೆಯ ಆಶಯ ಹಿನ್ನೆಲೆಗೆ ಸರಿದು, ನಾಗರಕಲ್ಲಿಗೆ, ಹುತ್ತಕ್ಕೆ ಹಾಲೆರೆಯುವಷ್ಟು ಯಾಂತ್ರಿಕವಾಗಿ ಮುಂದುವರಿದಿದೆ. ಆದರೆ ಹಾಲು ಹಾವುಗಳ ಆಹಾರವಲ್ಲ. ಯಾವುದೇ ಜಾತಿಯ ಹಾವುಗಳೂ ಹಾಲನ್ನು ಕುಡಿಯುವುದಿಲ್ಲ. ಅಲ್ಲದೆ ಭಾರತದಲ್ಲಿ ಪ್ರತೀ ವರ್ಷ ಸಾವಿರಾರು ಎಳೆ ಕಂದಮ್ಮಗಳು ಅಪೌಷ್ಟಿಕತೆಯಿಂದ ಸಾವನ್ನುಪ್ಪುತ್ತಿವೆ. ಎಷ್ಟೋ ಅನಾಥರಿಗೆ ಹಾಲೆಂಬುದು ಕೈಗೆಟುಕದ ಅಮೃತವಾಗಿದೆ. ಆದ್ದರಿಂದ ಆಚರಣೆಯ ನೆಪದಲ್ಲಿ ಹಾಲನ್ನು ಮಣ್ಣುಪಾಲು ಮಾಡುವ ಬದಲು ಬಡಕುಟುಂಬಗಳಿಗೆ, ಮೂಕ ಪ್ರಾಣಿಗಳಿಗೆ ನೀಡಬಹುದು. ಆ ಮೂಲಕ ಒಂದು ದಿನದ ಹಸಿವನ್ನು ನೀಗಿಸಿದ ಸಾರ್ಥಕತೆ ನಮ್ಮದಾಗುತ್ತದೆ. ಇನ್ನು ಹಾವುಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ವೈಜ್ಞಾನಿಕ ಪುಸ್ತಕಗಳನ್ನು ಓದಿಸುವುದು, ಡಾಕ್ಯುಮೆಂಟರಿ ಚಿತ್ರಗಳನ್ನು ವೀಕ್ಷಿಸುವುದು ಉತ್ತಮ. ಹಾವುಗಳ ಕುರಿತಾದ ಮೂಢನಂಬಿಕೆಗಳನ್ನು ಮೀರಿ ಅವುಗಳಿಗೂ ಬದುಕುವ ಅವಕಾಶ ಕಲ್ಪಿಸಿಕೊಡುವ ಮೂಲಕ ವರ್ಷಪೂರ್ತಿ ನಾಗರಪಂಚಮಿ ಹಬ್ಬವನ್ನು ಆಚರಿಸುವುದು ಸೂಕ್ತವಲ್ಲವೇ?