‘ನಂದಿನಿ’ ಉತ್ಪನ್ನಗಳ ಬಗ್ಗೆ ಪತ್ರಿಕೆಗಳಲ್ಲಿ ಬರುವ ಜಾಹೀರಾತಿಗೆ ಪೂರಕವಾಗಿ ಹೊರಗೆ ಅಂಗಡಿಗಳಲ್ಲಿ ಆ ಉತ್ಪನ್ನಗಳು ಸಿಗುತ್ತಿಲ್ಲ ಎಂಬ ನನ್ನ ಅನುಭವವನ್ನು ಹಂಚಿಕೊಂಡಿದ್ದೆ (ವಾ.ವಾ., ಫೆ. 17). ನನ್ನ ಆ ಪತ್ರಕ್ಕೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯವರು ಸ್ಪಂದಿಸುವ ನಿರೀಕ್ಷೆಯೇ ಇರಲಿಲ್ಲ. ಆದರೆ ಪತ್ರ ಪ್ರಕಟವಾದ ದಿನವೇ ನಂದಿನಿ ಉತ್ಪನ್ನಗಳ ಕ್ಷೇತ್ರ ನಿರ್ವಾಹಕರು, ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ, ನಂತರ ಮಾರುಕಟ್ಟೆ
ವ್ಯವಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು ಹೀಗೆ ಸಾಲು ಸಾಲಾಗಿ ಉನ್ನತ ಅಧಿಕಾರಿಗಳೇ ಕರೆ ಮಾಡಿ, ಅನನುಕೂಲಕ್ಕೆ ವಿಷಾದ ವ್ಯಕ್ತಪಡಿಸಿ, ಕ್ಷಮೆಯನ್ನೂ ಕೋರಿದರು. ಅತ್ಯಂತ ಸೌಜನ್ಯಯುತವಾಗಿ, ಬಹಳ ಕಳಕಳಿಯಿಂದ ಸ್ಪಂದಿಸಿ ದರು. ಮುಂದಿನ ದಿನಗಳಲ್ಲಿ ಯಾವ ಗ್ರಾಹಕರಿಗೂ ಇಂತಹ ಅನನುಕೂಲ ಮರುಕಳಿಸದೆಂಬ ಭರವಸೆಯನ್ನೂ ನೀಡಿದರು.