ಇತ್ತೀಚಿನ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಸ್ಥಳೀಯ ಚುನಾವಣಾ ಅಧಿಕಾರಿಗಳು ಮಾಡಿದ್ದ ದೂರುಗಳ ಪರಿಶೀಲನೆ ನಡೆಸಿದ ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು, ಈ ಮುಖಂಡರಿಗೆ ಕ್ಲೀನ್ ಚಿಟ್ ಕೊಟ್ಟಿದ್ದರು. ಆದರೆ, ಮತ್ತೊಬ್ಬ ಆಯುಕ್ತ ಅಶೋಕ ಲವಾಸಾ ಅವರು ಕ್ಲೀನ್ ಚಿಟ್ ಕೊಡುವ ಬಗ್ಗೆ ತಮ್ಮ ಅಸಮ್ಮತಿ ದಾಖಲಿಸಿದ್ದರು. ಲವಾಸಾ ಅವರು ದಾಖಲಿಸಿದ್ದ ಅಸಮ್ಮತಿ ಟಿಪ್ಪಣಿಯ ವಿವರ ಕೇಳಿ ಒಬ್ಬರು ಆರ್ಟಿಐ ಅರ್ಜಿ ಹಾಕಿದ್ದರು. ಅದಕ್ಕೆ ಉತ್ತರಿಸುತ್ತಾ ಆಯೋಗವು ಈ ಟಿಪ್ಪಣಿಯನ್ನು ಬಹಿರಂಗಪಡಿಸಿದರೆ ‘ವ್ಯಕ್ತಿಯ ಜೀವಕ್ಕೆ ಅಪಾಯವಿದೆ’, ಹಾಗಾಗಿ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ. ಆದರೆ, ಲವಾಸಾ ಅವರ ಜೀವಕ್ಕೆ ಅಪಾಯ ಒಡ್ಡುವವರು ಯಾರು?