ಬೆಂಗಳೂರಿನಲ್ಲಿ ನಡೆದ ಕುರುಬ ಸಮುದಾಯದ ಸಮಾವೇಶದಲ್ಲಿ ಸಚಿವ ಈಶ್ವರಪ್ಪನವರು ‘ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು’ ಎಂದು ಹೇಳಿದ್ದಾರೆ. ಅದೇ ರೀತಿ, ಕೆಲವು ದಿನಗಳ ಹಿಂದೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ‘ಪಂಚಮಸಾಲಿ ಸಮುದಾಯವು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ’ ಎಂದಿದ್ದರು. ಈ ಹೇಳಿಕೆಗಳನ್ನು ಗಮನಿಸಿದಾಗ, ಕೇವಲ ಒಂದೇ ಒಂದು ಸಮುದಾಯವು ಯಾರನ್ನಾದರೂ ಮುಖ್ಯಮಂತ್ರಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ಎಲ್ಲರೂ ಜಾತ್ಯತೀತವಾಗಿ ಚಿಂತನೆ ಮಾಡಬೇಕಾಗಿದೆ. ಯಾವುದೋ ಒಂದು ನಿರ್ದಿಷ್ಟ ಸಮುದಾಯವು ಯಾರನ್ನಾದರೂ ಮುಖ್ಯಮಂತ್ರಿ ಮಾಡಲು ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಎಷ್ಟೊಂದು ಸಮುದಾಯಗಳಿವೆ. ಹಾಗಾದರೆ ಅವುಗಳ ಪಾತ್ರ ಏನೂ ಇಲ್ಲವೇ? ಅವರಿಗೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಹಕ್ಕುಗಳಿಲ್ಲವೇ? ರಾಜಕಾರಣಿಗಳು ಹಾಗೂ ಸ್ವಾಮೀಜಿಗಳು ಈ ರೀತಿಯ ಹೇಳಿಕೆಗಳನ್ನು ನೀಡಿ, ಕರ್ನಾಟಕದ ಮುಖ್ಯಮಂತ್ರಿ ಪದವಿಗೆ ಒಂದು ಸಮುದಾಯದ ಪಟ್ಟಕಟ್ಟಿ ಅವಮಾನ ಮಾಡಬಾರದು. ಮುಖ್ಯಮಂತ್ರಿ ಪದವಿ ಜಾತ್ಯತೀತ ಮತ್ತು ಸಾಂವಿಧಾನಿಕವೇ ಹೊರತು ಯಾವುದೇ ಸಮುದಾಯಕ್ಕೆ ಸಂಬಂಧಪಟ್ಟಿದ್ದಲ್ಲ. ಹೀಗಾಗಿ ರಾಜಕಾರಣಿಗಳು, ಸ್ವಾಮೀಜಿಗಳು ಸಾಂವಿಧಾನಿಕ
ಪ್ರಜ್ಞಾವಂತಿಕೆಯಿಂದ ಹೇಳಿಕೆಗಳನ್ನು ನೀಡಲಿ.