ಕೆಲವು ಟಿ.ವಿ ಚಾನೆಲ್ಗಳಲ್ಲಿ ಪೌರಾಣಿಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಚಿಕ್ಕ ಮಕ್ಕಳಿಗೆ ಶಾಲೆಗಳಿಗೆ ರಜಾ ಇರುವ ಕಾರಣ, ಇಂತಹ ಧಾರಾವಾಹಿಗಳು ಅವರನ್ನು ಆಕರ್ಷಿಸುತ್ತಿವೆ. ಈ ಬಗೆಯ ಕೆಲವು ಧಾರಾವಾಹಿಗಳಲ್ಲಿ ವಶೀಕರಣ, ಮಾಟ, ಮಂತ್ರವಿದ್ಯೆಯಂತಹ ವಿಷಯಗಳನ್ನು ವೈಭವೀಕರಿಸಲಾಗಿರುತ್ತದೆ.
ಈ ದೃಶ್ಯಗಳು ಮಕ್ಕಳ ಮೇಲಷ್ಟೇ ಅಲ್ಲ ದೊಡ್ಡವರ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ.ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಇತ್ತೀಚೆಗೆ ಜ್ಯೋತಿಷಿಯ ಮಾತು ಕೇಳಿ, ತಮ್ಮ ಇಬ್ಬರು ಮಕ್ಕಳನ್ನೇ ಪೋಷಕರು ಆಯುಧದಿಂದ ಚುಚ್ಚಿ ಕೊಂದಿರುವುದು ಇದಕ್ಕೆ ನಿದರ್ಶನ.
ಇಂತಹ ಹಲವಾರು ಬಗೆಯ ಪ್ರಕರಣಗಳು ಸಮಾಜದಲ್ಲಿ ನಡೆಯುತ್ತಿರುವಾಗ, ಅದಕ್ಕೆ ಪೂರಕವಾಗುವಂತಹ ಸಂಗತಿಗಳೇ ಪ್ರಸಾರವಾದರೆ ಸಾಮಾಜಿಕ ಅವನತಿಗೆ ದಾರಿಯಾದಂತೆ ಆಗುತ್ತದೆ. ಕಪಟ ಜ್ಯೋತಿಷಿಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ವಿಷಯವನ್ನು ಧಾರಾವಾಹಿಗಳ ನಿರ್ಮಾಪಕರು, ನಿರ್ದೇಶಕರು ಗಂಭೀರವಾಗಿ ಪರಿಗಣಿಸಬೇಕು.