ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ನೋಡಿದರೆ, ‘ಕಾಡು ಬೆಳೆಸಿ ನಾಡು ಉಳಿಸಿ’ ಎಂಬ ಹೇಳಿಕೆಗೆ ಅರ್ಥವೇನಿದೆ ಎಂಬ ಪ್ರಶ್ನೆ ಮೂಡುತ್ತದೆ. ಈ ವರದಿಯಲ್ಲಿ ಗಣನೆಗೆ ತೆಗೆದುಕೊಂಡ ಗ್ರಾಮಗಳಲ್ಲಿ ಹೆಚ್ಚಿನವನ್ನು ಪರಿಸರಸೂಕ್ಷ್ಮ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ಇದರಲ್ಲಿ ಜನರಿಗೆ ಮಾರಕವಾಗುವ ಅಥವಾ ಒಕ್ಕಲೆಬ್ಬಿಸುವ ಅಂಶಗಳಿಲ್ಲ. ವರದಿಯಲ್ಲಿರುವ ಅಂಶಗಳ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಿ ಅವರ ತಳಮಳ, ಆತಂಕವನ್ನು ದೂರ ಮಾಡಬೇಕಾದುದು ಸರ್ಕಾರ ಮತ್ತು ಜನನಾಯಕರ ಕರ್ತವ್ಯ. ಆದರೆ ಇದನ್ನು ಚುನಾವಣಾ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಈ ವರದಿಯನ್ನು ತಿರಸ್ಕರಿಸುವುದು ದೇಶದ ನೈಸರ್ಗಿಕ ಸಂಪನ್ಮೂಲದ ಮೇಲೆ ಪರಿಣಾಮ ಬೀರುತ್ತದೆ.