ಸಕಾಲದಲ್ಲಿ ಮಳೆ ಬೀಳುವಂತೆ ಪ್ರಾರ್ಥಿಸಿ ಜಪ, ಹೋಮದಂಥ ಧಾರ್ಮಿಕ ವಿಧಿಗಳನ್ನು ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರ ನಡೆಸುವವರಿಗೆ ಒಂದು ಕೋರಿಕೆಯೆಂದರೆ, ಥಾರ್ ಹಾಗೂ ಸಹರಾ ಮರುಭೂಮಿಗಳಲ್ಲಿ ನೀವು ಮೊದಲು ಪೂಜೆ ಮಾಡಿಸಿ. ಏಕೆಂದರೆ, ಪ್ರಜೆಗಳ ಮೇಲಿರುವ ನಿಮ್ಮ ಅತಿ ಪ್ರೀತಿಯಿಂದ ನಿಮ್ಮ ಪ್ರಾರ್ಥನೆ ಫಲಿಸಿ, ಇಲ್ಲಿ ಪ್ರವಾಹ ಉಂಟಾಗಿಬಿಟ್ಟರೆ ಕಷ್ಟ, ಅದಕ್ಕೆ! ಮಳೆಯ ಆವರ್ತನ ಕೊಂಡಿಗಳನ್ನು ನಾವೇ ಕತ್ತರಿಸಿ, ನೀರಿಗಾಗಿ ದೇವರನ್ನು ಕರೆಯುವುದು ಎಷ್ಟು ಸರಿ? ಬೇಡುವಿಕೆಗೊಂದು ಬೆಲೆ ಬೇಡವೇ? ಸಾಲುಮರದ ತಿಮ್ಮಕ್ಕ ನೆಟ್ಟು ಪೋಷಿಸಿದ ಮರಗಳನ್ನು ರಸ್ತೆ ವಿಸ್ತರಣೆಯಂತಹ ಯೋಜನೆಗಳಿಗಾಗಿ, ಆಕೆ ಬದುಕಿರುವಾಗಲೇ ಬಲಿ ಕೊಡುವುದರಿಂದ ಖಂಡಿತವಾಗಿಯೂ ಮುಂದಿನ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು!