ಅನ್ನಭಾಗ್ಯ, ಸಮವಸ್ತ್ರ ಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ, ಸೈಕಲ್ ಭಾಗ್ಯ, ಚೂಡಿದಾರ್ ಭಾಗ್ಯದಂತಹ ಭಾಗ್ಯಗಳನ್ನು ದಯಪಾಲಿಸುವ ಮೂಲಕ ನಮ್ಮ ರಾಜ್ಯ ಸರ್ಕಾರವು ಶ್ರೀಮಂತರು ಮತ್ತು ಬಡವರ ನಡುವಣ ಕಂದಕವನ್ನು ಹಿರಿದಾಗಿಸುತ್ತಿದೆ. ಈ ಬಗೆಯ ಜನಪ್ರಿಯ ಯೋಜನೆಗಳಿಂದ ಕಾಯಕಪ್ರಜ್ಞೆ ನಶಿಸತೊಡಗಿದೆ.
ಇನ್ನು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ರಾಮಮಂದಿರ ನಿರ್ಮಾಣವೇ ಬಹುಮುಖ್ಯ ಅಜೆಂಡಾ. ಅದನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಉಪಖಂಡದಲ್ಲಿ ಕೋಮು ದಳ್ಳುರಿಯ ವಿಷಬೀಜ ಬಿತ್ತಿ ಫಸಲು ಪಡೆಯಲು ಹವಣಿಸುತ್ತಿದೆ. ನಮ್ಮ ಸರ್ಕಾರಗಳಿಗೆ ದೂರದರ್ಶಿತ್ವ ಇಲ್ಲವಾಗಿದೆ ಏಕೆ?
ವಿಜಯ್, ಪಾವಗಡ
ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಬರವೇ?
ರಾಜ್ಯದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ– ಸಂಸ್ಕೃತಿ ಇಲಾಖೆ ಈ ಎರಡಕ್ಕೂ ಒಬ್ಬರೇ ನಿರ್ದೇಶಕರಿದ್ದಾರೆ. ಈ ಎರಡೂ ಇಲಾಖೆಗಳನ್ನು ಒಬ್ಬರೇ ನಿಭಾಯಿಸಲು ಸಾಧ್ಯವೇ? ಎರಡೂ ಇಲಾಖೆಗಳಿಗೆ ಪ್ರತ್ಯೇಕ ನಿರ್ದೇಶಕರನ್ನು ನೇಮಿಸಲು ನಮ್ಮಲ್ಲಿ ಅಧಿಕಾರಿಗಳು ಇಲ್ಲವೇ? ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಅಧಿಕಾರಿಗಳಿಗೆ ಬರವೇ? ಕೆಂಗಲ್ ಹನುಮಂತಯ್ಯನವರು ದೂರದೃಷ್ಟಿ ಇಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಐವತ್ತರ ದಶಕದ ಆದಿಯಲ್ಲಿ ಪ್ರಾರಂಭಿಸಿದರು. ಆದರೆ ಅವರ ಕನಸಿಗೆ ಸರ್ಕಾರ ಇಂದು ಎಳ್ಳು ನೀರನ್ನು ಬಿಟ್ಟಂತೆ ಕಾಣುತ್ತಿದೆ.