‘ಸ್ವಚ್ಛತೆ ಕಾಪಾಡುವ ನಮಗೇ ಸುರಕ್ಷತೆ ಇಲ್ಲ’ ಎಂದು ಬೆಂಗಳೂರಿನ ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಅಳಲು ತೋಡಿಕೊಂಡಿರುವುದನ್ನು (ಪ್ರ.ವಾ., ಜೂನ್ 28) ತಿಳಿದು ದುಃಖವಾಯಿತು.
ಕೊರೊನಾದಿಂದ ಜನರನ್ನು ಪಾರು ಮಾಡುವ ಕಾರ್ಯದಲ್ಲಿ ನೆರವಾಗುತ್ತಿರುವ ಸ್ವಚ್ಛತಾ ಸಿಬ್ಬಂದಿ ಎನ್– 95 ಮುಖಗವಸು ಮತ್ತು ಅಗತ್ಯ ಸೌಲಭ್ಯ ಕೇಳಿದರೆ, ಆಡಳಿತ ಮಂಡಳಿಯು ‘ನಿಮಗೇಕೆ’ ಎಂದು ಕೇಳುತ್ತದೆ ಎಂದರೆ ಅರ್ಥವೇನು? ಸ್ವಚ್ಛತಾ ಸಿಬ್ಬಂದಿ ಮನುಷ್ಯರಲ್ಲವೇ? ಅವರಿಗೂ ಜೀವಿಸಲು ಅರ್ಹತೆ ಇಲ್ಲವೇ?
ತ್ಯಾಜ್ಯ ವಸ್ತುಗಳನ್ನು ನೋಡಿಯೇ ಅಸಹ್ಯಪಟ್ಟುಕೊಳ್ಳುವ ನಾವು, ರೋಗರುಜಿನವನ್ನೂ ಲೆಕ್ಕಿಸದೆ ಸ್ವಚ್ಛತೆಗಾಗಿ ಶ್ರಮಿಸುವ ಇವರ ಜೀವಕ್ಕೆ ಬೆಲೆ ಕೊಡದಿದ್ದರೆ ಹೇಗೆ? ಸ್ವಚ್ಛತಾ ಸಿಬ್ಬಂದಿ ಆರೋಗ್ಯದಿಂದಿದ್ದರೆ ನಾವು ಸಹ ನೆಮ್ಮದಿಯಿಂದ ಇರಬಹುದು ಎನ್ನುವುದನ್ನು ನಾವು ಅರಿಯಬೇಕು.
-ಬಾಲಕೃಷ್ಣ ಎಂ.ಆರ್., ಬೆಂಗಳೂರು