ಪಠ್ಯಪುಸ್ತಕ ವಿವಾದ ಇತ್ತೀಚೆಗೆ ತಾರಕಕ್ಕೇರಿ, ಮಕ್ಕಳ ಪುಸ್ತಕಗಳನ್ನು ಹೊಕ್ಕ ಹೊಲಸು ರಾಜಕೀಯ ರಾಡಿ ಎಬ್ಬಿಸುತ್ತಿದೆ. ಇಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಪುನರ್ಪರಿಷ್ಕರಣೆಯು ಆಳುವ ಪಕ್ಷಗಳು ಬದಲಾದಂತೆ ಘಟಿಸುವ ಸಾಮಾನ್ಯ ವಿದ್ಯಮಾನಗಳಾಗುತ್ತಿವೆ. ಹಾಗಾಗಿ ಅವುಗಳನ್ನು ಮುಂದಿನ ದಿನಗಳಲ್ಲಿ ಪಠ್ಯಪುಸ್ತಕಗಳು ಎನ್ನಬೇಕೋ ಪಕ್ಷ ಪ್ರಣಾಳಿಕೆಗಳು ಎನ್ನಬೇಕೋ ತಿಳಿಯುತ್ತಿಲ್ಲ. ಈ ಪಠ್ಯಪುಸ್ತಕದ ವಾದ ವಿವಾದಗಳೇನೇ ಇರಲಿ ಅದರದ್ದೇ ಆದ ಚೌಕಟ್ಟಿನ ಒಳಗೆ ಅದನ್ನು ಬಗೆಹರಿಸಿಕೊಳ್ಳಬೇಕಿದ್ದುದು ಸರ್ಕಾರದ ಘನತೆಯಾಗಿತ್ತು. ಆ ಘನತೆಯನ್ನು ಗಾಳಿಗೆ ತೂರಿದ ಸರ್ಕಾರ, ಅದನ್ನು ಹಾದಿ ಬೀದಿಯ ಜಗಳವನ್ನಾಗಿಸಿ, ಈ ನಾಡಿನ ಪ್ರಜ್ಞಾವಂತ ಆಸ್ತಿಯೊಂದನ್ನು ಕೇವಲವಾಗಿ ನಡೆಸಿಕೊಳ್ಳುತ್ತಾ ಅಕ್ಷರಶಃ ಬಾಲಿಶತನವನ್ನು ಮೆರೆಯುತ್ತಿದೆ. ಬರಗೂರು ರಾಮಚಂದ್ರಪ್ಪ ಅವರು ತಾವಾಗಿಯೇ ಪಠ್ಯ ಪರಿಷ್ಕರಣೆಗೆ ಮುಂದಾದವರಲ್ಲ. ಸರ್ಕಾರವೊಂದರ ಕೋರಿಕೆಯ ಮೇಲೆ 172 ಜನ ತಜ್ಞರನ್ನೊಳಗೊಂಡ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷರಾದವರು. ಇದನ್ನು ಅವರು ಆರಂಭದಲ್ಲೇ ಸ್ಪಷ್ಟಪಡಿ ಸಿದ್ದಾರೆ. ಆದಾಗ್ಯೂ ಅವರನ್ನು ಗುರಿಯನ್ನಾಗಿಸಿಕೊಂಡು ವೈಯಕ್ತಿಕವಾಗಿ ಟೀಕಿಸುತ್ತಿರುವುದು ಎಷ್ಟು ಸಮಂಜಸ?