ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಸಲ್ಲದು ಎಂಬ ಮುಖ್ಯಮಂತ್ರಿಯವರ ಹಿತನುಡಿ ಹಾಸ್ಯಾಸ್ಪದವಾಗಿದೆ. ರಾಜಕೀಯ ಅನ್ನುವುದು ವಿದ್ಯಾರ್ಥಿ ದೆಸೆಯಿಂದ ಬಂದರಷ್ಟೇ ಸಮಾಜದ ಎಲ್ಲ ಸ್ತರಗಳಿಂದ ಉತ್ತಮ ನಾಯಕರು ರೂಪುಗೊಳ್ಳಲು ಸಾಧ್ಯ. ಇಲ್ಲವಾದಲ್ಲಿ ರಾಜಕೀಯವು ಬಹುತೇಕ ವಂಶಾಡಳಿತಕ್ಕಷ್ಟೇ ಸೀಮಿತವಾಗಲಿದೆ. ಈಗಿರುವವರ ನಂತರ ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರಿಗಷ್ಟೇ ಮೀಸಲಾಗಬಹುದು. ಹಾಗಾದರೆ ಅದು ಜನಸಾಮಾನ್ಯರ ದೌರ್ಭಾಗ್ಯ. ಈಗಿನ ಜನಪ್ರತಿನಿಧಿಗಳಲ್ಲಿ ಕೆಲವರು ವಿದ್ಯಾರ್ಥಿ ಜೀವನದಿಂದಲೇ ರಾಜಕೀಯ ಮೈಗೂಡಿಸಿಕೊಂಡವರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದವರು ನಂತರ ಸಕ್ರಿಯ ಚುನಾವಣಾ ರಾಜಕೀಯಕ್ಕೆ ಬಂದು ದೊಡ್ಡ ನಾಯಕರಾಗಿ ಬೆಳೆದ ನಿದರ್ಶನಗಳು ನಮ್ಮಲ್ಲಿ ಅನೇಕ ಇವೆ.