‘ಜಾತಿಯಲ್ಲಿ ಮುಂದುವರಿದವರು ಅಂದಮಾತ್ರಕ್ಕೆ ಅವರನ್ನು ಸಾಮಾಜಿಕವಾಗಿ ತುಳಿಯುವುದು ಎಂಥ ಮಾನವೀಯತೆ’ ಎಂದು ಗಣಪತಿ ಶಿರಳಗಿ ಕೇಳಿದ್ದಾರೆ (ವಾ.ವಾ., ಜೂನ್ 28). ಅವರ ಈ ಮಾತನ್ನು ಒಪ್ಪುವುದು ಸಾಧ್ಯವಿಲ್ಲ. ಪರಿಶಿಷ್ಟ ಜಾತಿಯ ಅನಕ್ಷರಸ್ಥ, ವಸತಿಹೀನ, ಕೂಲಿಕಾರಳಾದ ಒಬ್ಬ ಹೆಣ್ಣು ಮಗಳ ಬಡತನವೂ ‘ಮುಂದುವರಿದ’ ಜಾತಿಯ ಅಕ್ಷರಸ್ಥ, ಆಸ್ತಿವಂತ, ವಸತಿಯುಳ್ಳ ಹೆಣ್ಣು ಮಗಳ ಬಡತನವೂ ಒಂದೇ ಅಲ್ಲ. ರಾಜ್ಯದಲ್ಲಿನ ಒಟ್ಟು ಸಾಕ್ಷರತೆಯು ಶೇ 75.36ರಷ್ಟಿದ್ದರೆ, ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳ ಸಾಕ್ಷರತೆಯು ಇಂದಿಗೂ ಶೇ 56.55ರಷ್ಟಿದೆ (2011ರ ಜನಗಣತಿ). ರಾಜ್ಯದಲ್ಲಿನ ಒಟ್ಟು ದುಡಿಮೆಗಾರರಲ್ಲಿ (15ರಿಂದ 60 ವರ್ಷಗಳ ವಯೋಮಾನ) ಭೂರಹಿತ, ದಿನಗೂಲಿ ಮಾಡುವವರ ಪ್ರಮಾಣ ಶೇ 25.67ರಷ್ಟಿದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಲ್ಲಿನ ಇವರ ಪ್ರಮಾಣ ಶೇ 32ಕ್ಕಿಂತ ಅಧಿಕವಾಗಿದೆ. ರಾಜ್ಯದಲ್ಲಿನ ಪೌರಕಾರ್ಮಿಕರಲ್ಲಿ ಶೇ 99ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಹಾಗಿದ್ದರೆ ‘ಜಾತಿಯಲ್ಲಿ ಮುಂದುವರಿದವರು’ ಯಾಕೆ ಸದರಿ ವೃತ್ತಿಯಲ್ಲಿಲ್ಲ? ಜಾತಿಯಲ್ಲಿ ಮುಂದುವರಿದವರ ‘ಮಾನವೀಯತೆ’ ಬಗ್ಗೆ ಮಾತನಾಡುವ ನಾವು ‘ಸನಾತನ ಅಸಮಾನತೆ’ ಉಂಟುಮಾಡಿರುವ ಅಮಾನವೀಯತೆ ಬಗ್ಗೆ ಏಕೆ ಮಾತನಾಡುತ್ತಿಲ್ಲ?!
-ಟಿ.ಆರ್.ಚಂದ್ರಶೇಖರ,ಬೆಂಗಳೂರು