ನವದೆಹಲಿ, ಏ. 10 (ಪಿಟಿಐ, ಯುಎನ್ಐ)– ಮಹಾತ್ಮ ಗಾಂಧಿ ‘ಮಹಾ ಪುರುಷ’. ದೇಶಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಲ್ಲಿ ಅವರು ಪ್ರಮುಖರು ಎಂದು ಆರೆಸ್ಸೆಸ್ ಇಂದು ವರ್ಣಿಸಿತು.
ಗಾಂಧೀಜಿ, ಅಂಬೇಡ್ಕರ್ ಮತ್ತಿತರರು ನಿಜವಾಗಿಯೂ ಮಹಾನ್ ವ್ಯಕ್ತಿಗಳಾಗಿದ್ದು, ಆರೆಸ್ಸೆಸ್ ಪಾಲಿಗೆ ಪ್ರಾತಃಸ್ಮರಣೀಯರು ಎಂದು ಸಂಘಟನೆಯ ಸರಸಂಘ ಸಂಚಾಲಕ ರಾಜೇಂದ್ರ ಸಿಂಗ್ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಯುಗಾದಿ ನಿಮಿತ್ತ ಏರ್ಪಡಿಸಿದ್ದ ಆರೆಸ್ಸೆಸ್ ಕಾರ್ಯಕರ್ತರ ರ್ಯಾಲಿಯಲ್ಲಿ ಹೇಳಿದರು.
ಪ್ರತಿ ಪಕ್ಷಗಳ ಒಕ್ಕೂಟಕ್ಕೆ ಚಂದ್ರಶೇಖರ್ ಕರೆ
ಕೋಟಾ, ಏ. 10 (ಪಿಟಿಐ)– ಡಂಕೆಲ್ ಪ್ರಸ್ತಾವ ಹಾಗೂ ಗ್ಯಾಟ್ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕುವುದರ ವಿರುದ್ಧ ಹೋರಾಡಲು ಐಕ್ಯ ರಂಗವೊಂದರ ರಚನೆಗೆ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಬೇಕೆಂದು ಮಾಜಿಪ್ರಧಾನಿ ಚಂದ್ರಶೇಖರ್ ಕರೆನೀಡಿದ್ದಾರೆ.
‘ಸೈತಾನ್’ ಅಮೆರಿಕ
ಟೆಹರಾನ್, ಏ. 10 (ಫೂಲ್ ಇರ್ನಾ)– ಇರಾನ್ ಅಮೆರಿಕದ ಜೊತೆ ಒಪ್ಪಂದ ಮಾಡಿಕೊಂಡು ಒಂದು ವರ್ಷವಾದ ಸಂದರ್ಭದಲ್ಲಿ ಪರ್ಷಿಯನ್ ದೈನಿಕವೊಂದು ಅಮೆರಿಕ ಈಗಲೂ ಒಂದು ದೊಡ್ಡ ‘ಸೈತಾನ್’ ಎಂದು ವರ್ಣಿಸಿದೆ.
ಈ ಒಪ್ಪಂದ ಇರಾನಿನ ಪರವಾಗಿತ್ತು. ಆದರೆ ಇಸ್ಲಾಂ ಕ್ರಾಂತಿಯನ್ನು ವಿಫಲಗೊಳಿಸಲು ಅಮೆರಿಕ ಸಂಚು ನಡೆಸುತ್ತಿದೆ ಎಂದು ಪತ್ರಿಕೆ ಆರೋಪಿಸಿದೆ.