ಪಟಾಕಿಯಲ್ಲಿರುವ ವಿವಿಧ ಬಗೆಯ ರಾಸಾಯನಿಕಗಳು ಗಾಳಿಗೆ ಸೇರಿದಾಗ ನಮ್ಮ ಉಸಿರಾಟದ ನಾಳಗಳಲ್ಲಿ ಉರಿ ತರಿಸುತ್ತವೆ, ರಕ್ತದಲ್ಲಿ ಸೇರಿ ಅದರ ಕ್ಷಮತೆಯನ್ನು ಕುಗ್ಗಿಸುತ್ತವೆ, ತನ್ಮೂಲಕ ರಕ್ತಹೀನತೆ ಎದುರಾಗುತ್ತದೆ. ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತವೆ. ಇದಲ್ಲದೆ ಪಟಾಕಿಗಳಿಂದ ಆಗುವ ಅಗ್ನಿ ಅನಾಹುತ, ಶಬ್ದಮಾಲಿನ್ಯ, ವಾಯುಮಾಲಿನ್ಯ ಹಾಗೂ ಪ್ರಾಣಿಗಳಿಗೆ ಎದುರಾಗುವ ಕುತ್ತು ಅಷ್ಟಿಷ್ಟಲ್ಲ. ಪಟಾಕಿಗಳನ್ನು ಸುಡುವುದರಿಂದ ಇಷ್ಟೆಲ್ಲ ತೊಂದರೆ ಇರುವುದನ್ನು ಅರಿತು, ಈ ಬಾರಿಯ ದೀಪಾವಳಿಯಲ್ಲಿ ದೀಪಗಳನ್ನು ಮಾತ್ರ ಬೆಳಗಿಸಿ ಸಂಭ್ರಮಪಡೋಣ. ಹಾನಿಕಾರಕ ಪಟಾಕಿಗಳಿಂದ ದೂರವಿರೋಣ.