ಸರ್ಕಾರಿ ಶಾಲೆಗಳ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪೋಷಕರಿಂದ ತಿಂಗಳಿಗೆ ₹ 100 ದೇಣಿಗೆ ಸಂಗ್ರಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿರುವ ಸುದ್ದಿ (ಪ್ರ.ವಾ., ಅ. 21) ಓದಿ ಗಾಬರಿಯಾಯಿತು. ಸರ್ಕಾರಿ ಶಾಲೆಗಳ ನಿರ್ವಹಣೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಸರ್ಕಾರವು ಈ ಹಿಂದೆ ಅನುದಾನ ನೀಡುತ್ತಿತ್ತು. ಸರ್ಕಾರಿ ಶಾಲೆಗಳ ನಿರ್ವಹಣೆಗೆ ಹೆಚ್ಚಿನ ಅನುದಾನವನ್ನು ನೀಡಿ, ಅವುಗಳನ್ನು ಸಬಲೀಕರಣಗೊಳಿಸುವ ಬದಲು ಪೋಷಕರಿಂದ ದೇಣಿಗೆ ಸಂಗ್ರಹಿಸಲು ಹೊರಟಿರುವ ನಿರ್ಧಾರ ಖಂಡನೀಯ. ಬಡ ಕುಟುಂಬಗಳ ಮಕ್ಕಳೇ ಸರ್ಕಾರಿ ಶಾಲೆಗಳಿಗೆ ಹೆಚ್ಚಿಗೆ ಬರುವುದು. ಅವರನ್ನು ಶಾಲೆಗೆ ಕಳಿಸುವುದೇ ಪೋಷಕರಿಗೆ ದುಸ್ತರವಾಗಿರುವಾಗ ಅವರಿಂದ ದೇಣಿಗೆ ಸಂಗ್ರಹ ಮಾಡುವುದು ಜನವಿರೋಧಿ ನೀತಿಯಾಗುತ್ತದೆ.
ಸರ್ಕಾರವು ಮಠಮಾನ್ಯಗಳಿಗೆ ನೂರಾರು ಕೋಟಿ ಹಣವನ್ನು ನೀಡುತ್ತಿದೆ, ಪ್ರತಿಮೆಗಳ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ, ಅದ್ಧೂರಿ ದಸರಾ ಸೇರಿದಂತೆ ಅನೇಕ ಉತ್ಸವಗಳಿಗೆ ಹಣ ವ್ಯಯಿಸುತ್ತಿದೆ. ಆದರೆ ಗ್ರಾಮಗಳ ಜ್ಞಾನದೇಗುಲಗಳಂತಿರುವ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಿ, ಅವುಗಳ ಬೆಳವಣಿಗೆಗೆ ಕಾರಣವಾಗುವ ಬದಲು ಪೋಷಕರ ಜೇಬಿಗೇ ಕತ್ತರಿ ಹಾಕಲು ಹೊರಟಿರುವುದು ಒಪ್ಪಲು ಸಾಧ್ಯವಿಲ್ಲ. ಈ ನಿರ್ಧಾರವು ಸರ್ಕಾರಿ ಶಾಲೆಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಈ ಸುತ್ತೋಲೆಯನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯಬೇಕು. ಶಾಲೆಗಳಿಗೆ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡಬೇಕು.
ಈ. ಬಸವರಾಜು, ಡಾ. ಟಿ.ಗೋವಿಂದರಾಜು, ಅಲ್ಲಮಪ್ರಭು ಬೆಟ್ಟದೂರು, ಎಲ್.ಎನ್.ಮುಕುಂದರಾಜ್, ಇಸ್ಮಾಯಿಲ್ ಯಲಿಗಾರ, ಡಾ. ಆರ್.ಎನ್.ರಾಜಾನಾಯಕ್, ಎಂ.ಸಿ.ಡೋಂಗ್ರೆ, ಪ್ರಭಾ ಬೆಳವಂಗಲ, ಶಿವಶಂಕರ್ ಕೆ.ಎನ್.