‘ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಡಿ ಮತ ಹಾಕಲು ಜನರೇನೂ ದಡ್ಡರಲ್ಲ. ಅವರ ಮೋಡಿ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡದು. ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ’ ಎಂಬ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಇತ್ತೀಚಿನ ಹೇಳಿಕೆ ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಸ್ವಲ್ಪ ವಿಳಂಬವಾದರೂ ಸಂಸದರು ವಾಸ್ತವವನ್ನು ತೆರೆದಿರಿಸುವ ಧೈರ್ಯ ಮತ್ತು ಪ್ರಯತ್ನವನ್ನು ಮಾಡಿದ್ದಾರೆ. ಈಗಿನ ರಾಜಕೀಯ ಮತ್ತು ಚುನಾವಣಾ ಪರಿಸ್ಥಿತಿಯು ಇಂದಿರಾ ಗಾಂಧಿ ಅವರ ಕಾಲದಲ್ಲಿ ಇದ್ದಂತೆ ಇದ್ದು, ವ್ಯಕ್ತಿ ಮತ್ತು ಪಕ್ಷ ಪೂಜೆ ಉತ್ತುಂಗದಲ್ಲಿದೆ. ಕಾಂಗ್ರೆಸ್ ಪಕ್ಷದ ಅಂದಿನ ಅಧ್ಯಕ್ಷ ಡಿ.ಕೆ.ಬರುವಾ ಅವರ ‘ಇಂದಿರಾ ಈಸ್ ಇಂಡಿಯಾ… ಇಂಡಿಯಾ ಈಸ್ ಇಂದಿರಾ’ ಘೋಷಣೆಯನ್ನು ನೆನಪಿಸುತ್ತದೆ.