ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು (ಪ್ರ.ವಾ., ಮಾರ್ಚ್ 25) ಸರ್ವೇ ಸಾಧಾರಣ ವಿಚಾರ. ಅಕ್ಕಿ ಮೂಟೆಗಳು ಕರ್ನಾಟಕ ಆಹಾರ ಪೂರೈಕೆ ನಿಗಮದ ಉಗ್ರಾಣಗಳಿಂದ ಪಾಲಿಶ್ ನೆಪದಲ್ಲಿ ಬಂಗಾರಪೇಟೆಯ ಅಕ್ಕಿ ಗಿರಣಿಗಳ ಮೂಲಕ ನೇರವಾಗಿ ಕಾಳಸಂತೆಗೆ ತಲುಪುತ್ತಿದ್ದುದು ಪತ್ತೆಯಾಗಿದೆ. ಚಾಲಕನ ಸಮೇತ ಲಾರಿಯನ್ನು ವಶಕ್ಕೆ ಪಡೆದಿದ್ದರೂ ಲಾರಿ ಮಾಲೀಕ ಮತ್ತು ಬೆಂಗಳೂರಿನ ಅಕ್ಕಿ ವರ್ತಕರೊಬ್ಬರು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದರೂ ಅನಾಮಿಕರ ಮೇಲೆ ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ. ಲಾರಿ ಚಾಲಕನನ್ನು ಪೊಲೀಸರು ಸರಿಯಾಗಿ ವಿಚಾರಿಸಿದರೆ ಎಲ್ಲಾ ಬಯಲಾಗುತ್ತದೆ. ಸೊಸೈಟಿಗಳಲ್ಲಿಯ ಪಡಿತರದಲ್ಲೂ ಅರ್ಧಭಾಗ ಕಾಳಸಂತೆಯಲ್ಲಿ ಹೋಟೆಲ್ಗಳಿಗೆ ಸರಬರಾಜು ಆಗುವುದು ಅರಿಯದ ಸಂಗತಿಯಲ್ಲ.