ಎರಡನೆಯ ಇನಿಂಗ್ಸ್ ಎಂಬ ಹೆಸರಿನಲ್ಲಿ ಟಿ.ವಿ ಚಾನೆಲ್ವೊಂದರಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮವು ಮತ್ತೆ ಪ್ರಾರಂಭವಾಗಿದೆ. ನಾಲ್ಕೈದು ದಿನಗಳ ಕಾರ್ಯಕ್ರಮವನ್ನು ನೋಡಿದ ನಂತರ, ಎರಡನೆಯ ಇನಿಂಗ್ಸ್ ಬೇಡವಾಗಿತ್ತೇನೋ ಎನಿಸುತ್ತದೆ. ಅಗಾಧ ಇಚ್ಛಾಶಕ್ತಿಯಿದ್ದರೆ, ಅಸಾಧ್ಯವೆಂದು ತೋರುವ ಕಾರ್ಯಗಳೂ ಸಾಧ್ಯ ಎಂಬುದನ್ನು ಒಂದು ‘ಕುರ್ಚಿ’ ಟಾಸ್ಕ್ ತೋರಿಸಿತು. ಮಲ-ಜಲ ಬಾಧೆಗಳನ್ನು ಸಹಿಸುತ್ತಾ ಅನ್ನಾಹಾರ-ನಿದ್ರೆಯೂ ಇಲ್ಲದೆ, ಕೊನೆಗೆ ನೀರನ್ನೂ ಕುಡಿಯದೆ, ವ್ಯಕ್ತಿಯೊಬ್ಬ 38 ಗಂಟೆಗಳ ಕಾಲ ಏಳದೆ, ಕುರ್ಚಿಯ ಮೇಲೆ ಕುಳಿತದ್ದು ಆಶ್ಚರ್ಯ ಹಾಗೂ ವಿಷಾದವನ್ನುಂಟುಮಾಡಿತು. ಇಂತಹ ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ನೀಡುವುದು ಎಷ್ಟು ಸರಿ? ಆಮರಣಾಂತ ಉಪವಾಸ ಮಾಡುವವರೂ ನೀರು ಕುಡಿಯುತ್ತಾರೆ, ಮಲ-ಜಲಬಾಧೆಗಳನ್ನು ಪರಿಹರಿಸಿಕೊಳ್ಳುತ್ತಾರೆ; ಆದರೆ, ಇಲ್ಲಿ? ಇಂತಹ ಕಾರ್ಯಗಳು ಬಹುಕಾಲಿಕ ಆರೋಗ್ಯ ಸಮಸ್ಯೆಗಳನ್ನು ತರುವುದಿಲ್ಲವೇ? ಇದೇ ಆವೃತ್ತಿಯ ಮೊದಲ ಭಾಗದಲ್ಲಿ, 18 ಗಂಟೆಗಳ ಕಾಲ ನೀರಿನ ಮಧ್ಯೆ ನಿಂತಿದ್ದ ತರುಣಿಯರ ಬಗ್ಗೆ ಆತಂಕವಾಗಿ,ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಶಂಕರ್ ನೀರಿಗೆ ಧುಮುಕಿ ಆ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಿದ್ದರು.