ಮಲೆನಾಡಿನ ರಕ್ಷಣೆಯೆಂಬುದು ಇಲ್ಲಿನ ಜನರನ್ನೂ ಒಳಗೊಂಡು ನಾಡಿನ ಹಿತ ಕಾಯುವಂಥದ್ದು. ಇಲ್ಲಿ ಹುಟ್ಟಿ ಇಕ್ಕೆಲಗಳಲ್ಲಿ ಹರಿಯುವ ನದಿಗಳೇ ಒಳನಾಡು ಹಾಗೂ ಕರಾವಳಿಯ ಕೃಷಿ ಮತ್ತು ಕುಡಿಯುವ ನೀರಿಗೆ ಆಧಾರ ಒದಗಿಸುವುದು. ಹವಾಮಾನ ಹದದಲ್ಲಿದ್ದು, ಜೀವವೈವಿಧ್ಯ ಸಂರಕ್ಷಣೆಯಾಗಿ, ಕೃಷಿ- ಮೀನುಗಾರಿಕೆ ಸುಸ್ಥಿರ ನೆಲೆಗಟ್ಟಿನಲ್ಲಿದ್ದರೆ ಮಾತ್ರ, ನಾವಿಂದು ಏರಿರುವ ‘ಅಭಿವೃದ್ಧಿ ಬಂಡಿ’ ಸುರಕ್ಷಿತವಾಗಿ ಸಾಗೀತು. ಈಗಲೂ ಸರ್ಕಾರ ಇದಕ್ಕೆ ಕಿವಿಗೊಡದಿದ್ದರೆ, ಭೂಕುಸಿತ, ನೆರೆ-ಬರ, ಬಿಸಿಗಾಳಿ, ನೀರಿನ ಕೊರತೆ, ಕೃಷಿ ಇಳುವರಿ ಕುಸಿತ- ಇವೆಲ್ಲ ಇನ್ನಷ್ಟು ಹೆಚ್ಚಿ, ಸಾಮೂಹಿಕ ಭವಿಷ್ಯವೇ ಅಂಧಕಾರಕ್ಕೆ ತಿರುಗೀತು. ಅಂದರೆ, ನಾವೀಗ ಸಂಭ್ರಮಿಸುತ್ತಿರುವ ಕೊಳ್ಳುಬಾಕ ಸಂಸ್ಕೃತಿಯ ‘ಮಿತಿಯಿರದ ಸುಖ’ದ ಕನಸು ಮುರಿಯುವ ವೇಳೆ ಬರುತ್ತಿದೆ ಎಂದೇ ಅರ್ಥ!